ಬೆಂಗಳೂರು ಗ್ರಾಮಾಂತರ : ಡೈನಮೈಟ್ ಇಟ್ರೆ, ಬಂಡೆ ಪುಡಿಯಾಗುತ್ತದೆ. ಅಕ್ಕ ಪಕ್ಕದವರು ನಾಪತ್ತೆಯಾಗ್ತಾರೆ ಎಂದು ಬೆಂಗಳೂರು ಗ್ರಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದರು.
ಬೆಂಗಳೂರು ಗ್ರಾಮಾಂತರದ ಹಾರಗದ್ದೆಯಲ್ಲಿ ಪ್ರಚಾರ ನಡೆಸಿದ ಅವರು ಪವರ್ ಟಿವಿ ‘ಡೇ ವಿತ್ ಲೀಡರ್’ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸುಡು ಬಿಸಿಲಿನಲ್ಲಿ ಜನ ಬಂದು ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ನೋಡಿದ್ರೆ ಆತ್ಮ ವಿಶ್ವಾಸ ಹೆಚ್ಚಾಗುತ್ತಿದೆ ಎಂದರು.
ಜನರ ಅಭಿಮಾನ, ಪ್ರೀತಿ ವ್ಯರ್ಥ ಮಾಡಲು ಸಾಧ್ಯವಿಲ್ಲ. ಜನರ ಪ್ರತಿನಿಧಿಯಾಗಿ ಹೇಗೆ ಸ್ಪಂದಿಸ್ತೀವಿ ಎನ್ನುವುದು ಮುಖ್ಯವಾಗುತ್ತದೆ. ಮಂಜುನಾಥ್ ಅವರ ಕೆಲಸ ಮಾಡ್ತಿದ್ದಾರೆ. ಅವರು ಮೋದಿ, ದೇವೆಗೌಡರ ಹೆಸರಲ್ಲಿ ಮತ ಕೇಳಬೇಕು. ಎಲ್ಲದಕ್ಕೂ ತೆರಿಗೆ ಹಾಕುವ ನೀತಿಯನ್ನು ಗಮನದಲ್ಲಿಟ್ಟುಕೊಂಡು ಮತ ನಾನು ಕೇಳುತ್ತೇನೆ. ಉದ್ಯೋಗ ಸೃಷ್ಟಿಯಾಗ್ತಿಲ್ಲ, ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದು ತಿಳಿಸಿದರು.
ಬೆಂಗಳೂರಿಗೆ ಕೆಟ್ಟ ಹೆಸರು ತರಲು ಸಂಚು
ದೇಶ ವಿಭಜನೆಯ ವಿಚಾರದಲ್ಲಿ ಹಿನ್ನಡೆ ಕುರಿತು ಮಾತನಾಡಿ, ಕರ್ನಾಟಕದ ಕನ್ನಡಿಗರ ತೆರಿಗೆ ಮುಖ್ಯ. ಕರ್ನಾಟಕದ ಮಕ್ಕಳ ಭವಿಷ್ಯ ಮುಖ್ಯ. ಹೊಸ ಯೋಜನೆಗಳಿಗೆ ಕೇಂದ್ರ ಅವಕಾಶ ಕೊಡ್ತಿಲ್ಲ. ಅಭಿವೃದ್ಧಿಗೆ ಹಣ ಕೊಡದೇ ವಂಚನೆ ಮಾಡ್ತಿದೆ. ಬೆಂಗಳೂರಿಗೆ ಕೆಟ್ಟ ಹೆಸರು ತರಲು ಬಿಜೆಪಿ ಸಂಚು ಮಾಡ್ತಿದೆ. ಇದು ನನ್ನೊಬ್ಬನ ಧ್ವನಿ ಅಲ್ಲ, ಕನ್ನಡಿಗರ ಧ್ವನಿ. ನಮ್ಮ ತೆರಿಗೆ ನಮ್ಮ ಹಕ್ಕು. ಮೇಕೆದಾಟು ನಮ್ಮದು. ಈ ಸಲ ನಿರೀಕ್ಷೆಗೂ ಮೀರಿ, ಹೆಚ್ಚು ಮತಗಳ ಅಂತರದಿಂದ ಜಯ ಗಳಿಸುತ್ತೇನೆ ಎಂದು ಡಿ.ಕೆ. ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.