ಹುಬ್ಬಳ್ಳಿ : ಧಾರವಾಡದಲ್ಲಿ ಹಿಟ್ಲರ್ ಆಳ್ವಿಕೆ ಇದೆ ಎಂಬ ವಿನಯ್ ಕುಲಕರ್ಣಿ ಆರೋಪಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು. ನಾನು ಹಿಟ್ಲರ್ ಆಗಿದ್ದರೆ ವಿನಯ್ ಕುಲಕರ್ಣಿ ಗೆಲ್ಲಲು ಆಗುತ್ತಿತ್ತೇ..? ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಿಟ್ಲರ್ ಆಗಿದ್ದಿದ್ದರೆ ಚುನಾವಣೆಯೇ ನಡೆಯುತ್ತಿರಲಿಲ್ಲ. ನಾನು ಒಂದು ವೇಳೆ ಹಿಟ್ಲರ್ ಆಗಿದ್ದರೆ ವಿನಯ್ ಕುಲಕರ್ಣಿ ಚುನಾವಣೆಯಲ್ಲಿ ಹೇಗೆ ಗೆದ್ದರು..? ಎಂದು ಕುಟುಕಿದರು.
ವಿನಯ್ ಕುಲಕರ್ಣಿ ಜೈಲಿಗೆ ಹೋಗಲಿಕ್ಕೆ ಪ್ರಲ್ಹಾದ್ ಜೋಶಿ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ದೇಶದ ಕಾನೂನಿನ ಬಗ್ಗೆ, ನ್ಯಾಯಾಲಯಗಳ ಬಗ್ಗೆ ಕಾಂಗ್ರೆಸ್ ನವರಿಗೆ ನಂಬಿಕೆ ಇಲ್ಲ. ಟ್ರಯಲ್ ಕೋರ್ಟ್ ನಿಂದ ಸುಪ್ರೀಂ ಕೋರ್ಟ್ ವರೆಗೂ ಅವರ ಕೇಸುಗಳು ನಡೆದಿವೆ. ಹಾಗಾಗಿ ಹತಾಶತನದಿಂದ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದು ಚಾಟಿ ಬೀಸಿದರು.
ಅದಕ್ಕೂ ನಮಗೂ ಸಂಬಂಧವಿಲ್ಲ
ಹಿಂದಿ ಪ್ರಚಾರ ಸಭೆ ವಿಚಾರದಲ್ಲಿಯೂ ರಾಜಕೀಯ ಆರೋಪದ ಬಗ್ಗೆ ಮಾತನಾಡಿ, ವಿನಯ್ ಕುಲಕರ್ಣಿ ಹತಾಶರಾಗಿ ಮಾತನಾಡಿದ್ದಾರೆ. ಇದರ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ಹಿಂದಿ ಪ್ರಚಾರ ಸಭೆ ಸ್ವಾಯತ್ತ ಸಂಸ್ಥೆ ಮಹಾತ್ಮ ಗಾಂಧೀಜಿ ಅವರು ಆರಂಭಿಸಿದ್ದರು. ಹಿಂದೆ ವಿಭೂತಿ ಅನ್ನೋರು ಅಧ್ಯಕ್ಷರಿದ್ದರು, ಈಗ ಮತ್ತೊಬ್ಬರು ಅಧ್ಯಕ್ಷರಾಗಿದ್ದಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.