ಬೆಂಗಳೂರು : ‘ಯುಗಾದಿ ಹಬ್ಬ’ದ ಶುಭಾಶಯಗಳು. ಬದುಕು ಬೇವು ಬೆಲ್ಲದಂತೆ ಸುಖವೂ ಇರುತ್ತದೆ, ದುಃಖವೂ ಇರುತ್ತದೆ. ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಜೀವನ ನಡೆಸಬೇಕು. ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ.
ವರ್ಷದ ಮೊದಲ ದಿನವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ಚೈತ್ರ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಹಾಗಾಗಿ ಈ ದಿನಕ್ಕೆ ಬಹಳ ವಿಶೇಷತೆ ಇದೆ. ದೃಕ್ ಪಂಚಾಂಗದ ಪ್ರಕಾರ, ಯುಗಾದಿಯನ್ನು ಈ ವರ್ಷ ಇಂದು (ಏಪ್ರಿಲ್ 9) ಆಚರಿಸಲಾಗುತ್ತಿದೆ.
ಈ ದಿನ ಯಾವ ರೀತಿ ಪೂಜೆ ಮಾಡಬೇಕು ಹಾಗೂ ಪೂಜೆಯ ಸಮಯವೇನು ಎಂಬುದು ಇಲ್ಲಿದೆ. ಪ್ರತಿಪದ ತಿಥಿಯು ಏಪ್ರಿಲ್ 8, 2024 ರಂದು ರಾತ್ರಿ 11.50 ಕ್ಕೆ ಪ್ರಾರಂಭವಾಗಿದ್ದು, ಏಪ್ರಿಲ್ 9, 2024 ರಂದು ರಾತ್ರಿ 8.30 ಕ್ಕೆ ಮುಗಿಯುತ್ತದೆ.
ಈ ಶುಭದಿನ ತಪ್ಪದೇ ಎಲ್ಲರೂ ಸಾಂಪ್ರದಾಯಿಕ ಎಣ್ಣೆ ಸ್ನಾನವನ್ನ ಮಾಡಬೇಕು. ಇದರ ನಂತರ ಪೂಜೆ ಮಾಡಿ, ಬೇವಿನ ಎಲೆಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ. ಬೇವಿನ ಸೊಪ್ಪು, ಬೆಲ್ಲ, ಕೊತ್ತಂಬರಿ ಬೀಜಗಳು ಮತ್ತು ಹುಣಸೆಹಣ್ಣುಗಳನ್ನು ಸೇರಿಸಿ ಉಂಡೆಯನ್ನ ತಯಾರಿಸಿ ಸೇವೆನ ಮಾಡಬೇಕು. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತದೆ.
ಯುಗಾದಿಯಂದು ಎಣ್ಣೆ ಸ್ನಾನ ಮಾಡುವುದರ ಹಿಂದೆ ಸಹ ಅನೇಕ ಅರ್ಥ ಹಾಗೂ ಪ್ರಯೋಜನಗಳು ಇದೆ. ಎಣ್ಣೆಯಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಮತ್ತು ನೀರಿನಲ್ಲಿ ಗಂಗಾ ದೇವಿ ಎಂಬ ನಂಬಿಕೆ ಇದೆ. ಹಾಗಾಗಿ ಇದರಿಂದ ಇಬ್ಬರ ಆಶೀರ್ವಾದವೂ ಸಿಗುತ್ತದೆ.