Friday, May 17, 2024

ರಾತ್ರಿ 12 ಗಂಟೆಗೆ ಹೆಣ್ಣು ಮಗಳು ಮೈತುಂಬ ಬಂಗಾರ ಹಾಕ್ಕೊಂಡು ಓಡಾಡಬೇಕು : ಶಾಸಕ ಯತ್ನಾಳ್

ವಿಜಯಪುರ : ಮಧ್ಯರಾತ್ರಿ 12 ಗಂಟೆಗೆ ನಮ್ಮ ಮನೆಯ ಹೆಣ್ಣು ಮಗಳು, ಪೂರ್ಣ ಪ್ರಮಾಣದ ಬಂಗಾರ ಹಾಕಿಕೊಂಡು ಓಡಾಡಿದರೂ ಯಾವುದೇ ಕೃತ್ಯವಾಗಬಾರದು. ಅದೇ ರಾಮ ರಾಜ್ಯ, ಈ ರಾಮ ರಾಜ್ಯ ಮಾಡಲು ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ಈ ಚುನಾವಣೆ ದೇಶಕ್ಕೆ ಮೋದಿ ಅವರನ್ನು ಪ್ರಧಾನಿ ಮಾಡುವ ಚುನಾವಣೆ ಅಲ್ಲ. ಲೋಕಸದಸ್ಯನನ್ನು ಆಯ್ಕೆ ಮಾಡುವ ಚುನಾವಣೆ ಅಲ್ಲ. ಹಿಂದೂ ಸನಾತನ ಧರ್ಮದ ಉಳಿವಿಗಾಗಿ ಈ ಚುನಾವಣೆ ಎಂದರು.

ನನ್ನ ದೇಶ, ನನ್ನ ಮನೆ ಸುರಕ್ಷಿತವಾಗಿರಬೇಕು. ಈಗಾಗಲೇ ಕಳೆದ 10 ವರ್ಷದಲ್ಲಿ ಪ್ರಧಾನಿ ಮೋದಿ ಅವರು ತೋರಿಸಿ ಕೊಟ್ಟಿದ್ದಾರೆ. ಮುಂದೆ ಸಹ ಐದು ವರ್ಷ ಭಾರತದ ಭವಿಷ್ಯ ಒಳೆಯದಾಗುತ್ತದೆ. ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲಲಿದೆ ಎಂದು ತಿಳಿಸಿದರು.

ಯಾರು ಆಟ ಆಡ್ತಿದ್ದಾರೆ ಎಲ್ಲಾ ಗೊತ್ತಿದೆ

ಪ್ರಲ್ಹಾದ್ ಜೋಶಿ ವಿರುದ್ಧ ದಿಂಗಾಲೇಶ್ವರ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಯಾರು ಏನು ಹೇಳಿದರು ಒಂದು ಮಾತು ಮಾತ್ರ ಸ್ಪಷ್ಟವಾಗಿದೆ. ಈ ದೇಶದ ಜನ ನರೇಂದ್ರ ಮೋದಿಯವರನ್ನು ಒಪ್ಪಿಕೊಂಡಿದ್ದಾರೆ. ಭಾರತ ಉಳಿಬೇಕು, ಹಿಂದೂ ಸನಾತನ ಧರ್ಮ ಉಳಿಬೇಕು, ಭಾರತ ಜಗತ್ತಿನ ವಿಶ್ವಗುರು ಆಗಬೇಕು ಎಂದರೆ ಮೋದಿಯವರನ್ನು ಬಿಟ್ಟರೆ ಯಾರೂ ಇಲ್ಲ. ಯಾರಬೇಕಾದವರು ಸ್ಪರ್ಧೆ ಮಾಡಲಿ ಅದು ಏನು ಆಗುವುದಿಲ್ಲ. ಯಾರು ನಿಲ್ಲಿಸುತ್ತಿದ್ದಾರೆ, ಯಾರು ಆಟ ಆಡ್ತಿದ್ದಾರೆ ಎಲ್ಲಾ ಗೊತ್ತಿದೆ ಎಂದು ಚಾಟಿ ಬೀಸಿದರು.

ರಾಜಕಾರಣದ ಬಗ್ಗೆ ಜಾಸ್ತಿ ಮಾತನಾಡಲ್ಲ

ಇವತ್ತು ಹೊಸ ವರ್ಷ ಇದೆ, ರಾಜಕಾರಣದ ಬಗ್ಗೆ ಜಾಸ್ತಿ ಮಾತನಾಡಲ್ಲ. ಒಟ್ಟಾರೆ ನಮಗೆ ಬೇಕಾಗಿರೋದು ದೇಶದ ಸುರಕ್ಷತೆ. ನಮ್ಮ ದೇಶದ ಜನರು ಶಾಂತಿಯಿಂದ ನೆಮ್ಮದಿಯಿಂದ ಇರಬೇಕು. ಭಯೋತ್ಪಾದನೆಯಿಂದ ಮುಕ್ತವಾಗಿ ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುವವರಿಂದ ಮುಕ್ತರಾಗಬೇಕು. ನವ ಭಾರತ ನಿರ್ಮಾಣ ಮಾಡುವ ಮೋದಿಯವರು ನನಗಲ್ಲ, ದೇಶದ ಜನರಿಗೆ ಬೇಕಾಗಿದೆ ಎಂದು ಯತ್ನಾಳ್ ಹೇಳಿದರು.

RELATED ARTICLES

Related Articles

TRENDING ARTICLES