Friday, May 17, 2024

ಯತ್ನಾಳ್ ವಿರುದ್ಧ ನನ್ನ ಹೆಂಡ್ತಿ ದೂರು ಕೊಟ್ಟಿದ್ದಾರೆ : ದಿನೇಶ್ ಗುಂಡೂರಾವ್

ಬೆಂಗಳೂರು : ದಿನೇಶ್‌ ಗುಂಡೂರಾವ್‌ ಅವರ ಅರ್ಧ ಮನೆ ಪಾಕಿಸ್ತಾನ ಎಂದಿರುವ ಬಿಜೆಪಿ ಶಾಸಕ ಯತ್ನಾಳ್ ಅವರ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಕೃತ ಮನಸ್ಥಿತಿಯವರು ಇವರು. ನಾಲಿಗೆ ಮೇಲೆ ಹಿಡಿತ ಇಲ್ಲ. ಬಿಜೆಪಿಯಲ್ಲಿ ಇಂಥವರ ಸಂಖ್ಯೆ ಹೆಚ್ಚಿದೆ. ಜನರ ಮುಂದೆ ದ್ವೇಷ ಹೆಚ್ವಿಸೋದು ಅವರ ಕೆಲಸ. ಹೀಗಾಗಿಯೇ ನಮ್ಮ ಶ್ರೀಮತಿ ಅವರ ವಿರುದ್ಧ ದೂರು ಕೊಟ್ಟಿದ್ದಾರೆ. ಚುನಾವಣೆ ಆಯೋಗಕ್ಕೂ ದೂರು ಕೊಡುವ ಕೆಲಸ ಆಗಲಿದೆ ಎಂದು ಹೇಳಿದರು.

ಮುಖ್ಯ ವಿಚಾರಗಳು ಬೇರೆ ಬೇರೆ ಇವೆ. ಕೀಳು ಮಟ್ಟದ ರಾಜಕಾರಣ ಅಷ್ಟೆ ಇದು. ಸೋಲಿನ ಅಂಚಿನಲ್ಲಿ, ಹತಾಷೆಯಿಂದ ಹೀಗೆ ಮಾತಾಡ್ತಾ ಇದ್ದಾರೆ. ಮೋದಿ ವಿಶ್ವ ಗುರು ಅಂತ ಹೇಳಿಕೊಂಡು ತಿರುಗಾಡ್ತಾ ಇದ್ದಾರೆ. ಮಾತಾಡೋಕೆ ಅವರಿಗೆ ಬೇರೆ ಏನೂ ಇಲ್ಲ. ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶ ಅಚ್ಚರಿಯಾಗಿ ಬರಲಿದೆ 400 ಅಲ್ಲ, 200ಕ್ಕಿಂತ ಕಡಿಮೆ ಸ್ಥಾನ ಅವರಿಗೆ ಬರಲಿದೆ ಎಂದು ಕುಟುಕಿದರು.

ಶಾ, ನಿರ್ಮಲಾ ಮಹಾ ಸುಳ್ಳುಗಾರರು

ಕೇಂದ್ರದ ಅನುದಾನ ವಿಚಾರವಾಗಿ ಮಾತನಾಡಿ, ಅಮಿತ್ ಶಾ ಅವರು ಅವರ ಹೇಳಿಕೆಯೊಂದನ್ನ ಕೊಟ್ಟಿದ್ದರು. ತಡವಾಗಿ ಬಂದಿದ್ದರು ಹಾಗಾಗಿ ಅನುದಾನ ಸಿಗಲಿಲ್ಲ ಅಂತ. ಆ ವಾದವನ್ನ ಕೋರ್ಟ್ ಮುಂದೆ ಮಂಡಿಸಬೇಕು. ಅಮಿತ್ ಶಾ ಇಲ್ಲಿ ಬಂದು ಭಾಷಣ ಮಾಡೋದಲ್ಲ ಅಫಿಡವಿಟ್ ಕೊಡಲಿ ಅವರು. ನಿರ್ಮಲಾ ಸೀತಾರಾಮ್ ಅವರು ಇಬ್ಬರೂ ಮಹಾ ಸುಳ್ಳುಗಾರರು. ಇಡೀ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ಲೇವಡಿ ಮಾಡಿದರು.

ವಿಪಕ್ಷದ ಸ್ಥಾನಕ್ಕೂ ಮರ್ಯಾದೆ ಇರೋದಿಲ್ಲ

ತಡವಾಗಿದ್ದರೆ ಕ್ರಮ ವಹಿಸುತ್ತೇವೆ ಅಂತ ಒಪ್ಪಿಕೊಂಡರೆ ಮಾನ ಹರಾಜಾಗೋದಾದ್ರೂ ತಪ್ಪುತ್ತದೆ. ಇದು ಕೂಡ ಚುನಾವಣೆಗೆ ಎಫೆಕ್ಟ್ ಆಗುತ್ತದೆ. ಸತ್ಯ ಒಪ್ಪಿಕೊಂಡರೆ ಜನ ಅಟ್ ಲೀಸ್ಟ್ ಕ್ಷಮಿಸ್ತಾರೆ. ಇದೊಂದು ಮಲತಾಯಿ ಧೋರಣೆ ಅನ್ನೋದು ಜನರಿಗೆ ಗೊತ್ತಾಗಿದೆ. ಎಲ್ಲಾ ವಿಚಾರದಲ್ಲೂ ಜನರಿಗೆ ಅನ್ಯಾಯ ಆಗಿದೆ. ಒಂದು ಕಡೆ ಸುಳ್ಳು, ಮತ್ತೊಂದು ಕಡೆ ಅನ್ಯಾಯ. ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಆರ್ ಅಶೋಕ್, ಬಿಜೆಪಿ ಅವರು ಇದ್ದಾರೆ. ಬಾಯಿಗೆ ಬಂದಂತೆ ಅಶೋಕ್ ಮಾತಾಡಿದ್ದಾರೆ. ಜ್ಞಾನದ ಕೊರತೆ ಅವರಿಗೆ ಇದೆ. ಹೀಗೆ ಮಾತಾಡಿದ್ರೆ ವಿಪಕ್ಷದ ಸ್ಥಾನಕ್ಕೂ ಮರ್ಯಾದೆ ಇರೋದಿಲ್ಲ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದರು.

RELATED ARTICLES

Related Articles

TRENDING ARTICLES