ಶಿವಮೊಗ್ಗ : ಶೋಭಾ ಕರಂದ್ಲಾಜೆ ಮೇಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಬಹಳ ಪ್ರೀತಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ಕುಟುಕಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನನ್ನ ಜಾತಿ ವೋಟು ಇಲ್ಲಿ ಜಾಸ್ತಿ ಇಲ್ಲ. ಆದರೂ, ಐದು ಬಾರಿ ಎಂಎಲ್ಎ ಮಾಡಿದ್ದೀರಿ ಎಂದು ಹೇಳಿದರು.
ಬಿ.ವೈ. ರಾಘವೇಂದ್ರ ಸೋತರೆ ನೋವಿನ ಬೆಲೆ ಯಡಿಯೂರಪ್ಪನವರಿಗೆ ಗೊತ್ತಾಗಲಿದೆ. ಸೋಲೋದಕ್ಕೆ ಬೇರೆಯವರು, ಗೆಲ್ಲೋದಕ್ಕೆ ತಮ್ಮ ಮಕ್ಕಳು. ಯಡಿಯೂರಪ್ಪನವರೇ ನಾನೇನು ತಪ್ಪು ಮಾಡಿದ್ದೆ. ನನಗ್ಯಾಕೆ ವಿಧಾನಸಭಾ ಟಿಕೆಟ್ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
25 ಸಾವಿರ ಜನರು ಸೇರಬೇಕು
ಇನ್ನೊಬ್ಬ ನಾಯಕ ಬೆಳಿಬಾರದು ಅಂತ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದರು. ಯಡಿಯೂರಪ್ಪನವರೇ ಯಾಕೆ ಮೋಸ ಮಾಡಿದ್ರಿ. ಮೋಸಗಾರರಿಗೆ ಎಂದು ನ್ಯಾಯ ಸಿಗಲ್ಲ ಅಂತ ತೋರಿಸಬೇಕು. ಏಪ್ರಿಲ್ 12 ನೇ ತಾರೀಖು ಬೆಳಗ್ಗೆ 10 ಗಂಟೆಗೆ 25 ಸಾವಿರ ಜನರು ಸೇರಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ
ಲಿಂಗಾಯತ ಸಮಾಜಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದು ಈಶ್ವರಪ್ಪ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ನಿಮಗೆ ಅನ್ಯಾಯ ಆಗಿದೆ. ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ನಾವು ನಿಮಗೆ ಮತ ಕೊಡ್ತೇವೆ ಅಂತ ಮತದಾರರು ಹೇಳ್ತಿದ್ದಾರೆ. ಬೂತ್ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.