ತುಮಕೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆಗಮಿಸಿದ್ದಾರೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆಗೋದಕ್ಕೆ ಅವರೇ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರ ನಾಮಪತ್ರ ಸಲ್ಲಿಕೆಗೆ ಮುನ್ನ ನಡೆದ ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿದರು. ಈ ವೇಳೆ ಯಡಿಯೂರಪ್ಪ ಜೊತೆಗಿನ ಸ್ನೇಹವನ್ನು ಮೆಲುಕು ಹಾಕಿದರು.
ತುಮಕೂರು ಮೈತ್ರಿ ಅಭ್ಯರ್ಥಿಯಾಗಿ ನನ್ನ ಹಿರಿಯ ಸ್ನೇಹಿತ ಸೋಮಣ್ಣ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸಲ್ಲಿಸಿದ್ದ ಹಿರಿಯರಾದ ಯಡಿಯೂರಪ್ಪನವರು ಆಗಮಿಸಿದ್ದಾರೆ. ಅಂದು ನಮಗಿಂತ ಹೆಚ್ಚು ಶಾಸಕರಿದ್ದರೂ ನಮಗೆ ಅವಕಾಶವನ್ನ ಕೊಟ್ಟಿದ್ರು. ನಾವು ಅವರು ಸೇರಿ 2006ರಲ್ಲಿ ಸರ್ಕಾರ ರಚಿಸಿದ್ವಿ ಎಂದು ತಿಳಿಸಿದರು.
ಯಡಿಯೂರಪ್ಪ ರೈತರಿಗೆ 4 ಸಾವಿರ ಕೊಡ್ತಿದ್ರು
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ರಾಜ್ಯ ಸರ್ಕಾರದಿಂದ 4 ಸಾವಿರ ಕೊಡ್ತಿದ್ರು. ಆದ್ರೆ, ಕಾಂಗ್ರೆಸ್ ಸರ್ಕಾರ ಇದನ್ನು ನಿಲ್ಲಿಸಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ನಾವು ನುಡಿದಂತೆ ನಡೆದಿದ್ದೇವೆ ಅಂತ ಹೇಳ್ತಿದ್ದಾರೆ. ಐದು ಉಚಿತ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಅಂತ ದೊಡ್ಡದಾಗಿ ಹೇಳಿಕೊಳ್ಳುತ್ತಿದ್ದಾರೆ. ನಾಡಿನ ತೆರಿಗೆಯ ಹಣವನ್ನ ದುಂದು ವೆಚ್ಚ ಮಾಡಿ, ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕೊಬ್ಬರಿಗೆ ಬೆಂಬಲ ಬೆಲೆ ಕೊಡ್ತಿರೋದು ಮೋದಿ
ಯಾವ ಅಭಿವೃದ್ಧಿ ಕೆಲಸಗಳನ್ನು ಈ ಸರ್ಕಾರ ಮಾಡ್ತಿಲ್ಲ. ಮಾಡಿದ್ದಾರೆ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ನೀವು ಇದನ್ನು ಹೇಳಬೇಕಾಗುತ್ತೆ. ಐದು ಗ್ಯಾರಂಟಿ ಗಳನ್ನ ಕೊಟ್ಟಿದ್ದೀವಿ ಅಂತ ಜಾಹಿರಾತುಗಳನ್ನು ಕೊಟ್ಟು ಪ್ರಚಾರ ಪಡೀತಾ ಇದ್ದಾರೆ. ಕೊಬ್ಬರಿಗೆ ಬೆಂಬಲ ಬೆಲೆ ಕೊಡ್ತಿರೋದು ಕೇಂದ್ರ ಸರ್ಕಾರದ ದುಡ್ಡು. ಸೋಮಣ್ಣ ಅವರನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ಹೆಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದರು.