ಬೆಂಗಳೂರು : ಸುಳ್ಳುಗಳ ಸರದಾರ ಅಮಿತ್ ಶಾ ಸುಳ್ಳು ಹೇಳಿದ್ದಾರೆ. ಎಲೆಕ್ಟ್ರೋ ಬಾಂಡ್ ಸರದಾರ ರಾಜ್ಯಕ್ಕೆ ಬಂದು ಸುಳ್ಳು ಹರಿಬಿಟ್ಟಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಲೇವಡಿ ಮಾಡಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ, ಅಮಿತ್ ಶಾ ಸೂರ್ಯನಿಗೆ ಟಾರ್ಚ್ ಹಿಡಿಯುವ ಕೆಲಸ ಮಾಡಿದ್ದಾರೆ. ಮೂರು ತಿಂಗಳು ವಿಳಂಬ ಅಂತ ಹೇಳಿದ್ದಾರೆ. ಬರದ ವರದಿ ಕೊಡಲು ವಿಳಂಬ ಅಂದಿದ್ದಾರೆ. ಸೆಪ್ಟಂಬರ್ 22 ರಂದು ಮನವಿ ಸಲ್ಲಿಸಿದ್ದೇವೆ ಎಂದು ಕುಟುಕಿದರು.
ಕರ್ನಾಟಕ ಜನರಿಗೆ ಮೋಸ ಮಾಡಿದ್ರಿ. ಹಸಿ ಸುಳ್ಳು ಹೇಳಿ ಮುಚ್ಚೋಕೆ ನೋಡ್ತಿದ್ದೀರಿ. ಕರ್ನಾಟಕದ ರೈತರನ್ನ ಕಂಡರೆ ಯಾಕೆ ನಿಮಗೆ ದ್ವೇಷ? ಅತಿ ಹೆಚ್ಚು ತೆರಿಗೆ ಕಟ್ಟುವುದು ನಾವು. ಮಹಾರಾಷ್ಟ್ರ ನಮಗಿಂತ ಹೆಚ್ಚು ಕಟ್ಟುತ್ತದೆ. ಆದರೆ ಅಲ್ಲಿ ಜನ ಹೆಚ್ಚಿದ್ದಾರೆ. ಆದರೆ, ನಮ್ಮಲ್ಲಿ ಕಡಿಮೆ ಇದ್ರೂ ಹೆಚ್ಚು ಕಟ್ತೇವೆ. ನಾವೇ ನಂಬರ್ 1 ತೆರಿಗೆ ಕಟ್ಟುವವರು ಎಂದು ಹೇಳಿದರು.
ರೈತರು ನಿಮಗೆ ಏನು ಅನ್ಯಾಯ ಮಾಡಿದ್ದಾರೆ?
ನಮ್ಮ ರಾಜ್ಯಕ್ಕೆ ಯಾಕೆ ಮೋಸ ಮಾಡ್ತಿದ್ದೀರಿ? ನಮ್ಮ ದುಡಿಮೆ, ನಮ್ಮ ವೋಟು ಪಡೆದು ಕಪಾಳಕ್ಕೆ ಹೊಡೆಯುತ್ತಿದ್ದಿರಿ. ಮೋಸ ಮಾಡುವುದಷ್ಟೇ ಅಲ್ಲ, ನಮ್ಮ ರಾಜ್ಯದ ಜನರಿಗೆ ಅನ್ಯಾಯ ಮಾಡ್ತಿದ್ದೀರಿ. ನಮ್ಮನ್ನೇ ಅವಮಾನ ಮಾಡ್ತಿದ್ದೀರಿ. ಕರ್ನಾಟಕ ನಿಮಗೆ ಏನು ಅನ್ಯಾಯ ಮಾಡಿದೆ? ನಮ್ಮ ರೈತರು ನಿಮಗೆ ಏನು ಅನ್ಯಾಯ ಮಾಡಿದ್ದಾರೆ? ಪ್ರತಿದಿನ ಜನರನ್ನು ಮರಳುಮಾಡೋಕೆ ಆಗಲ್ಲ. ನಮ್ಮ ಜನ ಸ್ವಾಭಿಮಾನಿಗಳು ಎಂದು ವಾಗ್ದಾಳಿ ನಡೆಸಿದರು.
ನಮ್ಮ ದುಡ್ಡು ದೋಚಿ ಹೋದವರು ನೀವು
ನಾವು ಭಿಕ್ಷೆ ಪಾತ್ರೆ ಹಿಡಿದು ನಿಮ್ಮಲ್ಲಿಗೆ ಬಂದಿಲ್ಲ. ನಮ್ಮ ಹಣವನ್ನ ದೋಚಿ ಹೋದವರು ನೀವು. ಚುನಾವಣೆಯಲ್ಲಿ ಜನ ನಿಮಗೆ ಪಾಠ ಕಲಿಸ್ತಾರೆ. ಎಲೆಕ್ಷನ್ ಕಮೀಷನ್ಗೆ ಬರೆದಿದ್ದೀವಿ ಅಂತಾರೆ. ಎಲ್ಲಿ ಸಾಕ್ಷಿ ಕೊಡಿ ಬರೆದಿರೋದಕ್ಕೆ ಎಂದು ಕೇಂದ್ರ ಸರ್ಕಾರಕ್ಕೆ ಕೃಷ್ಣಬೈರೇಗೌಡ ಸವಾಲ್ ಹಾಕಿದರು.