ಶಿವಮೊಗ್ಗ : ದೇವರ ಮೇಲೆ ಆಣೆ ಮಾಡಿ ಕತ್ತನ್ನು ಕೊಯ್ಯುವ ಕೆಲಸ ಮಾಡುತ್ತಾರೆ. ಇವರಿಗೆ ನಾವೇನು ಬಯಸಲ್ಲ. ಆದರೆ, ಇವರಿಗೆ ಆ ದೇವರೇ ನೋಡಿಕೊಳ್ಳುತ್ತಾನೆ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಕೆ.ಎಸ್. ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್ ವಾಗ್ದಾಳಿ ನಡೆಸಿದರು.
ಶಿವಮೊಗ್ಗ ನಗರಮಟ್ಟದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಸದ ಬಿ.ವೈ. ರಾಘವೇಂದ್ರ ನನಗೆ ಕರೆ ಮಾಡಿದ್ದರು. ಆಗ ದೇವರಾಣೆಗೂ ನಿನಗೆ ಹಾವೇರಿ ಟಿಕೆಟ್ ಆಗಿದೆ ಎಂದಿದ್ದರು. ದೇವರಿಗೂ ಇವರು ಬಿಡಲ್ಲ ಎಂದು ಕುಟುಕಿದರು.
ನಮ್ಮ ತಂದೆಗೆ ಕಳೆದ ವಿಧಾನಸಭೆ ಟಿಕೆಟ್ ಸಿಕ್ಕಿಲ್ಲ. ನನಗೆ ಹಾವೇರಿ ಟಿಕೆಟ್ ಕೂಡ ಮಿಸ್ ಆಯ್ತು. ನನಗೆ ಹಾವೇರಿ ಟಿಕೆಟ್ ಆಗಿದ್ದರೆ ಖಂಡಿತವಾಗಿಯೂ ಗೆಲ್ಲುತ್ತಿದ್ದೆ. ದೇವರು ನಮಗೆ ಒಳ್ಳೆಯ ಸ್ಥಾನಮಾನ ಕೊಡುತ್ತಾರೆ ಎಂದು ನಂಬಿದ್ದೇವೆ. ನಾನು ಬಿಜೆಪಿಗರಿಗೆ ಕೇಳುತ್ತೇನೆ. ನಾನು ಕಾಂತೇಶ ಮಾಡಿದ ತಪ್ಪಾದರೂ ಏನು ಎಂದು ಕೇಳಲು ಬಯಸುತ್ತೇನೆ. ಅವರು ಹೇಳಲಿ, ಕಾಂತೇಶ್ ಮಾಡಿದ ತಪ್ಪಾದರೂ ಏನು ಎಂದು ಹೇಳಲಿ ಎಂದು ಅಸಮಾಧಾನ ಹೊರಹಾಕಿದರು.
ಯಡಿಯೂರಪ್ಪ ಅವರಿಗೂ ಗೊತ್ತಾಗಲಿ
ಈ ವಿಷಯ ಯಡಿಯೂರಪ್ಪ ಅವರಿಗೂ ಗೊತ್ತಾಗಲಿ. ಮುಂಬರುವ ಮಾ.12 ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದೆವೆ. ನೀವೆಲ್ಲಾ ಸಹಸ್ರಾರು ಸಂಖ್ಯೆಯಲ್ಲಿ ಇಲ್ಲಿ ಸೇರಿದ್ದು ಕೇವಲ ಸ್ಯಾಂಪಲ್ ಅಷ್ಟೇ. ಇನ್ನೂ ಸಾವಿರಾರು ಜನರು ಅಂದು ಸೇರಬೇಕು. ನಾಮಪತ್ರ ಸಲ್ಲಿಸುವ ದಿನ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಕೆ.ಈ. ಕಾಂತೇಶ್ ಮಾನವಿ ಮಾಡಿದರು.