ಹಾಸನ : ಹೇ.. ಪ್ರೀತಂ ಗೌಡ ನಿನ್ನನ್ನು ಸಮಾಧಿ ಮಾಡಿಬಿಡ್ತಾರೆ. ಹೇ.. ಸಿಮೆಂಟ್ ಮಂಜಾ, ಸುರೇಶ್ ನಿಮ್ಮನ್ನು ಬಿಡಲ್ಲ. ಬೆಳ್ಳಿ ಪ್ರಕಾಶಾ.. ಎಲೆಕ್ಷನ್ ಮುಗಿದ ಮೇಲೆ ಬೆಳ್ಳಿನೂ ಇರಲ್ಲ, ಚಿನ್ನನೂ ಇರಲ್ಲ ಎಂದು ಜೆಡಿಎಸ್ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಹಾಸನದಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರಿಗೆ ಮನವಿ ಮಾಡಿಕೊಳ್ತೇನೆ. ಇವರು ನನ್ನನ್ನೇ ಬಿಟ್ಟಿಲ್ಲ, ಇನ್ನೂ ನಿಮ್ಮನ್ನು ಬಿಡ್ತಾರಾ..? ಎಲೆಕ್ಷನ್ ಕಳೆದ ಮೇಲೆ ನಿಮ್ಮನ್ನು ಬಿಡ್ತಾರಾ..? ಎಂದು ಎಚ್ಚರಿಕೆ ನೀಡಿದರು.
ಇಡೀ ದೇಶ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಚುನಾವಣೆ ನೋಡುತ್ತಿದೆ. ಮೊಮ್ಮಗನನ್ನು ಹಾಸನದಿಂದ ನಿಲ್ಲಿಸಿದ್ದಾರೆ. ಅಳಿಯನನ್ನು ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರದಲ್ಲಿ ನಿಲ್ಲಿಸಿದ್ದಾರೆ. ಮಂಡ್ಯದಲ್ಲಿ ಮಗನನ್ನು ನಿಲ್ಲಿಸಿದ್ದಾರೆ. ಒಂದೇ ಕುಟುಂಬದಿಂದ ಮೂವರು ನಿಂತಿದ್ದಾರೆ. ಬೇರೆ ಯಾರೂ ಇರಲಿಲ್ಲವಾ..? ಎಂದು ಕಿಡಿಕಾರಿದರು.
ಅಳಿಯ ಶಕ್ತಿಶಾಲಿ ಆಗಿದ್ರೆ, JDSನಿಂದ ನಿಲ್ಲಿಸುತ್ತಿದ್ರು
ಹಿಂದೆ ನನ್ನ ತಮ್ಮ ಡಿ.ಕೆ. ಸುರೇಶ್ಗೆ ಟಿಕೆಟ್ ಕೊಟ್ಟರು. ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿ ನಿಲ್ಲಿಸಿದ್ರು. ಡಿ.ಕೆ. ಸುರೇಶ್ ಒಂದು ಮತಗಳಿಂದ ಲಕ್ಷದಿಂದ ಗೆದ್ದರು. ಯಾರ ವಿರುದ್ಧ ಅನಿತಾ ಕುಮಾರಸ್ವಾಮಿ ವಿರುದ್ಧ. ನಮಗೆ ರಾಜಕೀಯ ಹೊಸದೇನಲ್ಲ. ಅವರ ಪಕ್ಷ, ಅಳಿಯ ಶಕ್ತಿಶಾಲಿ ಆಗಿದ್ರೆ, ಅವರ ಪಕ್ಷದಿಂದ ನಿಲ್ಲಿಸುತ್ತಿದ್ದರು. ಜೆಡಿಎಸ್ ಶಕ್ತಿ ಕಳೆದುಕೊಂಡಿದೆ ಎಂದು ಚಾಟಿ ಬೀಸಿದರು.
ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ
ಈ ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಯಾರು ಅಧಿಕಾರದಿಂದ ಇಳಿಸಿದ್ರು, ಅವರ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು, ಅವರ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯನ್ನು ಡಿ.ಕೆ. ಶಿವಕುಮಾರ್ ಟೀಕಿಸಿದರು.