ಹಾಸನ : ಕುಮಾರಸ್ವಾಮಿ ಹೇಳ್ತಾ ಇದ್ದಾರೆ, ಮೈತ್ರಿ ಸರ್ಕಾರ ಬೀಳಿಸಿದ್ದು ನಾವೇ ಅಂತ. ಕುಮಾರಣ್ಣ, ಈ ಹಾಸನಾಂಬೆ ಮೇಲೆ ಸತ್ಯ (ಪ್ರಮಾಣ) ಮಾಡಿ ಹೇಳಲಿ ಎಂದು ದಳಪತಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಹಿರಂಗ ಸವಾಲ್ ಹಾಕಿದರು.
ಹಾಸನದಲ್ಲಿ ಮಾತನಾಡಿದ ಅವರು, ನಾನು, ಜಿ.ಟಿ. ದೇವೇಗೌಡ ಹಾಗೂ ಶಿವಲಿಂಗೇಗೌಡ ಮೈತ್ರಿ ಸರ್ಕಾರ ಉಳಿಸಲು ಹಾಗೂ ಕುಮಾರಸ್ವಾಮಿ ಉಳಿಸಲು ಬಾಂಬೆಗೆ ಹೋಗಿದ್ವಿ ಎಂದರು.
ನಾನು ಹಾಸನಾಂಬೆ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ನಾವು ತಾಯಿಗೆ ದ್ರೋಹ ಮಾಡುವ ಮಕ್ಕಳಲ್ಲ, ಹೋರಾಟ ಮಾಡುವ ಮಕ್ಕಳು. ತಾಯಿ ಹಾಸನಾಂಬೆ ಆಶೀರ್ವಾದ ಶ್ರೇಯಸ್ ಪಟೇಲ್ ಮೇಲೆ ಇದೆ. ಒಂದು ಲಕ್ಷ ಮತಗಳಿಂದ ಶ್ರೇಯಸ್ ಗೆಲ್ತಾರೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮ ಪಾರ್ಟಿಗೆ ಶಕ್ತಿ ಎಲ್ಲಿದೆ?
ನಿಮ್ಮ ಸ್ವಂತ ಅಳಿಯನನ್ನು ನಿಮ್ಮ ಪಾರ್ಟಿಯಿಂದ ನಿಲ್ಲಿಸಲು ಆಗಲಿಲ್ಲ ಅಂದ್ರೆ ನಿಮ್ಮ ಪಾರ್ಟಿಗೆ ಶಕ್ತಿ ಎಲ್ಲಿದೆ? ಜೆಡಿಎಸ್ನಿಂದ ಮೂವರು, ಬಿಜೆಪಿಯಿಂದ ಒಬ್ಬರು ಸೇರಿ ನಾಲ್ಕು ಜನ ನಿಂತಿದ್ದಾರೆ. ಈ ನಾಲ್ಕು ಜನರಲ್ಲಿ ಯಾರೂ ಗೆಲ್ಲಲು ಸಾಧ್ಯವಿಲ್ಲ. ಈ ಜೆಡಿಎಸ್ ಪಕ್ಷ ಶಕ್ತಿ ಕಳೆದುಕೊಂಡಿದೆ ಎಂದು ಕುಟುಕಿದರು.
ನಿಮ್ಮ ಹೆಣವನ್ನೂ ಹೊರುತ್ತೇವೆ
ಹೇ.. ಯಾರೂ ಕಿರುಚಾಡಬೇಡಿ. ನಾನು ಮಾತನಾಡುವುದನ್ನು ಮೀಡಿಯಾದವರು ತಗೋಬೇಕು. ಮಧ್ಯಾಹ್ನನೇ ತಗೊಬಿಟ್ಟಿದ್ದೀರಾ ಅನಿಸುತ್ತದೆ. ನಿಮ್ಮ ಪಲ್ಲಕ್ಕಿಯನ್ನು ಹೊರುತ್ತೇವೆ, ನಿಮ್ಮ ಹೆಣವನ್ನೂ ಹೊರುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.