ಮೈಸೂರು : ನಾನು ಇರಬೇಕು ಅಂದರೆ ವರುಣ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಕರೆ ಕೊಟ್ಟಿದ್ದಾರೆ. ಆ ಮೂಲಕ ಪರೋಕ್ಷವಾಗಿ ತಮಗೆ ಸಿಎಂ ಸ್ಥಾನ ಕೈ ತಪ್ಪುವ ಭೀತಿಯಿದೆ ಎಂಬ ಸಂದೇಶ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, ವರುಣ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಡಿ. ಆಗ ನನ್ನ ಯಾರು ಮುಟ್ಟಲು ಆಗಲ್ಲ. ನಾನು ಇರಬೇಕಾ ಬೇಡ್ವಾ..? ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ.
ಎಲ್ಲಿದೆ ಜೆಡಿಎಸ್ ಅಂತ ನಾನು ಹೇಳಿಲ್ಲ. ಅಪವಿತ್ರ ಮೈತ್ರಿ ಆದಮೇಲೆ ಎಲ್ಲಿದೆ ಜೆಡಿಎಸ್ ಅಂತ ಕೇಳಿದ್ದೇನೆ. ಇದು ತಪ್ಪಾ..? ಸತ್ಯ ಮಾತನಾಡಲು ಶುರು ಮಾಡಿದರೆ ಎಲ್ಲರೂ ಒದೆಯೋಕೆ ಬರುತ್ತಾರೆ. ಅವರು ಒದೆಯೋದು ತಪ್ಪಿಸಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು. ಅಳಿಯನನ್ನು ದೇವೇಗೌಡರು ಬಿಜೆಪಿಗೆ ಕಳಿಸಿದ್ದಾರೆ. ಜೆಡಿಎಸ್ ನಲ್ಲಿ ಟಿಕೆಟ್ ಕೊಡಿಸಲು ಆಗಲಿಲ್ವಾ..? ಯಾಕಪ್ಪ ಈ ರೀತಿ ನಾಟಕ ಆಡ್ತಾ ಇದ್ದೀರಾ..? ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಹೆಣ್ಣು ಮಕ್ಕಳು ಬಸ್ಸಿನಲ್ಲಿ ಓಡಾಡುತ್ತಿಲ್ವಾ..?
ನಾವು 10 ಕೆಜಿ ಕೊಡ್ತೇವೆ ಎಂದಾಗ ಬಿಜೆಪಿಯವರು ಕೇಂದ್ರ ಆಹಾರ ಇಲಾಖೆಗೆ ಕೊಡದಂತೆ ಮಾಡಿದ್ರು. 5 ಕೆಜಿ ಅಕ್ಕಿಯ ಬದಲು ಹಣ ಕೊಡಲು ನಾವು ತೀರ್ಮಾನ ಮಾಡಿದೆವು. ನಾವು ಮಾಡಿರುವ ಎಲ್ಲಾ ಕಾರ್ಯಕ್ರಮಗಳು ಬಡವರಿಗಾಗಿ. ಬಿಜೆಪಿಯಲ್ಲಿರುವ ಬಡವರಿಗೂ ಜಾರಿ ಮಾಡಿದ್ದೇವೆ. ಬಿಜೆಪಿಯ ಹೆಣ್ಣು ಮಕ್ಕಳು ಬಸ್ಸಿನಲ್ಲಿ ಓಡಾಡುತ್ತಿಲ್ವಾ..? ಎಂದು ಬಿಜೆಪಿ ವಿರುದ್ಧವೂ ಕಿಡಿಕಾರಿದ್ದಾರೆ.