ತುಮಕೂರು : ಸಚಿವ ಡಾ.ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಹೊರಗಿನವರು ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿರುವ ಅವರು, ತಮ್ಮನ್ನು ಹೊರಗಿನವರು ಎಂಬ ಮಾತನ್ನು ತಡೆಯಲು ಸ್ಥಳೀಯರನ್ನೇ ಹೊರಗಿನವರು ಎಂದು ಜರಿದಿದ್ದಾರೆ.
ಸೋಮಣ್ಣ ಅವರು ಹೊರಗಿನೋರು.. ಹೊರಗಿನೋರು.. ಅಂತಾರೆ. ಇಲ್ಲಿ ಯಾರು ಹೊರಗಿನವರು? ಯಾರು ಒಳಗಿನವರು? ಎಂಬುದನ್ನು ಮೊದಲು ತಿಳಿಯಬೇಕು. ಕಾಂಗ್ರೆಸ್ನವರಿಗೆ ಯಾವ ರೀತಿ ದೇವರು ಬುದ್ದಿ ಕೊಟ್ಟಿದ್ದಾನೋ ಗೊತ್ತಿಲ್ಲ. ಸೋನಿಯಾ ಗಾಂಧಿನಾ ಬಳ್ಳಾರಿಗೆ ಕರೆದುಕೊಂಡು ಬಂದಿದ್ದು ಯಾರು? ಎಂದು ಚಾಟಿ ಬೀಸಿದ್ದಾರೆ.
ಸಣ್ಣ ವಿಚಾರನ ದೊಡ್ಡದು ಮಾಡೋ ಅಗತ್ಯ ಇಲ್ಲ
ನಾವು ಒಂದು ಜಿಲ್ಲೆಯ ಪಕ್ಕದ ಜಿಲ್ಲೆಯವರು. ಮುಖ್ಯವಾಗಿ ಪರಮೇಶ್ವರ್, ರಾಜಣ್ಣ ಅವರು ಈ ಜಿಲ್ಲೆಯವರಲ್ಲ. ಮಾಗಡಿ ತಾಲೂಕಿನವರು ಅವತ್ತಿಗೆ ಬೆಂಗಳೂರು ಗ್ರಾಮಾಂತರದವರು. ಮುದ್ದಹನುಮೇಗೌಡ್ರು ಬೆಂಗಳೂರು ಗ್ರಾಮಾಂತರದ ಮತದಾರರು. ಸಣ್ಣ ವಿಚಾರನ ದೊಡ್ಡದು ಮಾಡೋ ಅಗತ್ಯ ಇಲ್ಲ ಎಂದು ಹೊರಗಿನವರು ಎಂಬ ಮಾತಿಗೆ ಮಾಜಿ ಸಚಿವ ಸೋಮಣ್ಣ ಟಕ್ಕರ್ ಕೊಟ್ಟಿದ್ದಾರೆ.