ತುಮಕೂರು : ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಸಿದ್ದಗಂಗಾ ಮಠಕ್ಕೆ ಹೋಗ್ತೀರಾ..? ಎಂದು ಬಿಜೆಪಿ ವಿರುದ್ಧ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿ ಹಾಗೂ ಸೋಮಣ್ಣ ವಿರುದ್ಧ ಕಿಡಿಕಾರಿದ್ದಾರೆ.
ಸಿದ್ದಗಂಗಾ ಶ್ರೀಗಳು ಸುಮಾರು ವರ್ಷದಿಂದ ಸೇವೆ ಮಾಡಿಕೊಂಡು ಬಂದ್ರು. ನಮ್ಮ ಸರ್ಕಾರ ಸಹ ಶ್ರೀಗಳಿಗೆ ಭಾರತ ರತ್ನ ಕೊಡಿ ಅಂತ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿತು. ನಾವೆಲ್ಲಾ ಶ್ರೀಗಳಿಗೆ ಭಾರತ ರತ್ನ ಕೊಡಿ ಅಂತ ಕೇಳಿದ್ವಿ. ಆದ್ರೆ, ಯಾರು ಯಾರಿಗೋ ಕೊಟ್ಟು ಬಿಟ್ರು ಈ ಬಿಜೆಪಿಯವರು ಎಂದು ಹರಿಹಾಯ್ದಿದ್ದಾರೆ.
ಯಾವ ಮುಖ ಇಟ್ಕೊಂಡು ಸೋಮಣ್ಣ ಅಲ್ಲಿಗೆ ಹೋಗ್ತಾನೆ
ಎಷ್ಟು ವರ್ಷಕ್ಕೆ ಒಬ್ಬರಿಗೆ ಭಾರತ ರತ್ನ ಕೊಡೋದು..? ಆದ್ರೆ ಈ ಬಾರಿ ನಾಲ್ಕು ಜನರಿಗೆ ಭಾರತ ರತ್ನ ಕೊಟ್ರು. ನಮ್ಮ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಕೊಡೋದಕ್ಕೆ ಹಿಂದೇಟು ಹಾಕಿ ಬಿಟ್ರು. ಬಿಜೆಪಿಯವರು, ಇವತ್ತು ಯಾವ ಮುಖ ಇಟ್ಟುಕೊಂಡು ಸಿದ್ದಗಂಗಾ ಮಠಕ್ಕೆ ಹೋಗ್ತಿರಾ? ಯಾವ ಮುಖ ಇಟ್ಟುಕೊಂಡು ಸೋಮಣ್ಣ ಅಲ್ಲಿಗೆ ಹೋಗ್ತಾನೆ. ಆ ನೋವಿನಿಂದ ನಾನು ಇವತ್ತು ಮಾತನಾಡ್ತಾ ಇದ್ದೇನೆ ಎಂದು ಡಾ.ಜಿ. ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.