ತುಮಕೂರು : ಯಾರೋ ನೋಡಿ ಬಂದ ಹೆಣ್ಣನ್ನು ನಾನು ಮದುವೆ ಆಗಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ವಾಗ್ದಾಳಿ ನಡೆಸಿದರು.
ತುಮಕೂರಿನ ಚಿಕ್ಕನಾಯಕನಹಳ್ಳಿಯ ಜೆ.ಸಿ ಪುರದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಕಾರಣಕ್ಕೂ ವಿ. ಸೋಮಣ್ಣರಿಗೆ ಬೆಂಬಲ ನೀಡಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಅಸಮಾಧಾನ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ನನಗೆ ಬಿಜೆಪಿ ಟಿಕೆಟ್ ಕೊಟ್ಟರೂ ನಾನು ಸ್ಪರ್ಧಿಸಲ್ಲ. ಬಿಜೆಪಿಯವರು ಕರೆದರೂ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹರಿಹಾಯ್ದರು.
ಬಿಜೆಪಿಯಿಂದ ಅಶೋಕ್ ಬಂದಿದ್ದು ನಿಜ
ಮಾಧುಸ್ವಾಮಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಅವರು, ಯಾಕೆ ಹಾಗೆಲ್ಲ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೋ ಗೊತ್ತಿಲ್ಲ. ನಾನು ಕಾಂಗ್ರೆಸ್ಗೆ ಸೇರುತ್ತೇನೆ, ಬಂದೇ ಬರುತ್ತೇನೆ ಎಂದು ಯಾರ ಬಳಿಯೂ ಹೇಳಿಲ್ಲ. ಮನೆಗೆ ಬಂದವರ ಬಳಿ ಸೌಜನ್ಯವಾಗಿ ಮಾತನಾಡಿದ್ದೇನೆ. ಹಾಗಂತ ಬರಲ್ಲ ಎಂದೂ ಎಲ್ಲೂ ಹೇಳಲ್ಲ. ಬಿಜೆಪಿಯಿಂದ ಅಶೋಕ್ ಬಂದಿದ್ದು ನಿಜ. ಯಾಕೆ ಬಂದಿದ್ದೀರಿ ಎಂದು ಕೇಳಿದೆ. ಯಾಕೆ ನಾನು ಬರಬಾರದಾ? ಮಾತನಾಡರಬಾರದಾ? ಅಂದ್ರು ಎಂದು ತಿಳಿಸಿದರು.
ಕಾಂಗ್ರೆಸ್ನಿಂದ ಮಾಧುಸ್ವಾಮಿಗೆ ಬಿ ಫಾರಂ
ನಾನು ಎರಡ್ಮೂರು ವಿಷಯಗಳನ್ನು ಹೇಳಲು ಬಯಸುತ್ತೇನೆ. ನಾನು ಕಾಂಗ್ರೆಸ್ ಪಕ್ಷ ಸೇರಲಿದ್ದೇನೆ ಎಂದು ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಕಾಂಗ್ರೆಸ್ನ ಬಿ ಫಾರಂ ಮಾಧುಸ್ವಾಮಿಗೆ ಸಿಗುತ್ತೆ ಅಂತಾನೂ ಬರೆದಿದ್ದಾರೆ. ಬಿ ಫಾರಂ ಬದಲಾಯಿಸಿ ಕಾಂಗ್ರೆಸ್ ಪಕ್ಷದವರು ಕರೆದ್ರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಧುಸ್ವಾಮಿ ಹೇಳಿದರು.