ಬೆಂಗಳೂರು : ಮಜವಾದಿ ಸಿದ್ದರಾಮಯ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ಕನ್ನಡಿಗರಿಗೆ ವಂಚಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ನಾಡ ದ್ರೋಹಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕಾವೇರಿಯನ್ನು ಕದ್ದು ಮುಚ್ಚಿ ತಮಿಳುನಾಡಿಗೆ ಹರಿಸಿದ ಪರಿಣಾಮ ನೀರಿಗೆ ಹಾಹಾಕಾರ ಉಂಟಾಗಿದೆ ಎಂದು ಛೇಡಿಸಿದೆ.
ರಾಜ್ಯದಲ್ಲಿ ಎಂತಹ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ, ಕಳೆದ 50-60 ವರ್ಷಗಳ ಹಿಂದಿನ ಬರದ ಪರಿಸ್ಥಿತಿ ಇದೀಗ ಮತ್ತೊಮ್ಮೆ ಮರುಕಳಿಸಿದೆ. ಕಾವೇರಿಯ ಉಗಮ ಸ್ಥಾನವೇ ಬತ್ತಿ ಹೋಗಿದೆ. ಕೊಡಗಿನಲ್ಲಿ ಹುಟ್ಟಿ 4 ಜಿಲ್ಲೆಗಳಲ್ಲಿ ಹರಿದು ನಾಡಿನ ಹಲವು ಜಿಲ್ಲೆಗಳಿಗೆ ಜೀವನಾಧಾರವಾಗಿರುವ ಕಾವೇರಿಯ ಒಡಲು ಸಂಪೂರ್ಣವಾಗಿ ಬರಿದಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದೆ.
ಕಾವೇರಿ ಒಡಲು ಬಗೆದು ನೀರು ಹರಿಸಿದೆ
ಇಂತಹ ಕೆಟ್ಟ ಪರಿಸ್ಥಿತಿಯಲ್ಲೂ ಮಜವಾದಿ ಸಿದ್ದರಾಮಯ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ಕನ್ನಡಿಗರಿಗೆ ವಂಚಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ನಾಡಿನ ಹಲವು ಭಾಗಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯ ತುಂಬಿ ತುಳುಕುತ್ತಿದ್ದರೂ ಕಾವೇರಿ ಒಡಲು ಬಗೆದು ನೀರು ಹರಿಸಿದ ಪರಿಣಾಮವೇ ಈ ದುಸ್ಥಿತಿಗೆ ಕಾರಣ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.