ಆನೇಕಲ್ : ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದ ಯುವತಿಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ.
ಹರ್ಷಿತ್ ಮನನೊಂದು ನೇಣಿಗೆ ಶರಣಾದ ಪ್ರೇಮಿ. ಇಂದ್ರಕುಮಾರ್ ಮತ್ತು ರಾಧಾ ದಂಪತಿಗಳ ಪುತ್ರ ಹರ್ಷಿತ್, ತುಮಕೂರು ಮೂಲದ ಮೃದುಲ ಯಾನೆ ಮೇಘ ಎಂಬಾಕೆಯನ್ನು ಪ್ರೀತಿ ಮಾಡುತ್ತಿದ್ದ. ಆನೇಕಲ್ ಎಎಸ್ ಬಿ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿ ಹುಟ್ಟಿಕೊಂಡಿತ್ತು. ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಇವರು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ರಷ್ಯಾ ಒಕ್ಕೂಟಕ್ಕೆ ಭಾರತದ ನೂತನ ರಾಯಭಾರಿಯಾಗಿ ವಿನಯ್ ಕುಮಾರ್ ನೇಮಕ!
ತಂದೆ-ತಾಯಿ ಇಲ್ಲದ ಮೃದುಲ ಅತ್ತೆ ಮತ್ತು ಮಾವನ ಮನೆಯಲ್ಲಿ ವಾಸವಾಗಿದ್ದಳು. ಯುವತಿಯ ಮನೆಗೆ ಇವರ ಪ್ರೀತಿಯ ವಿಚಾರ ತಿಳಿದಿದ್ದು, ಯುವಕ ಹರ್ಷಿತ್ಗೆ ನಿಂದಿಸಿದ್ದಾರೆ. ಯುವತಿಯ ಬಳಿ ಮಾತನಾಡದಂತೆ ಧಮಕಿ ಹಾಕಿದ್ದರು. ಯುವತಿಗೂ ಆಕೆಯ ಅತ್ತೆ ಮಾವ ನಿರ್ಬಂಧ ಹಾಕಿದ್ದರು. ಯುವತಿಯೂ ಇದರಿಂದ ಬೆದರಿ ಹರ್ಷಿತ್ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು.
ಇದರಿಂದ ಮನನೊಂದ ಹರ್ಷಿತ್ ಕೈ ಕೊಯ್ದುಕೊಂಡು ನೇಣು ಹಾಕಿಕೊಂಡಿರುವುದು ಬೆಳಕಿಗೆ ಬಂದಿದೆ. ಯುವತಿ ಮೃದುಲ @ ಮೇಘ, ಆಕೆಯ ಅತ್ತೆ ಕವಿತಾ, ಮಾವ, ಜೊತೆಗೆ ಅಪರಿಚಿತ ನಂಬರ್ನಿಂದ ಫೋನ್ ಮಾಡಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.