ಬೆಂಗಳೂರು : ಸಿಎಎ ಜಾರಿಯಿಂದ ಕಾಂಗ್ರೆಸ್ ಹಾಗೂ ಎಡಬಿಡಂಗಿ ಪಕ್ಷಗಳಿಗೆ ಅನಾನುಕೂಲ ಆಗಲಿದೆ ಎಂದು ಬಿಜೆಪಿ ಕುಟುಕಿದೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ಭಾರತವನ್ನು ತುಕ್ಡೇ ತುಕ್ಡೇ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.
ಸಿಎಎ ಜಾರಿಯಿಂದ ತುಷ್ಟೀಕರಣ ರಾಜಕೀಯ ಮಾಡುವುದಕ್ಕೆ ಪೆಟ್ಟು ಬೀಳಲಿದೆ. ಅಕ್ರಮವಾಗಿ ವಲಸೆ ಬರುವ ರೋಹಿಂಗ್ಯಾ ಜನರನ್ನು ತಡೆಯಲಿದೆ. ವೋಟ್ ಬ್ಯಾಂಕ್ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ ಎಂದು ಜಾಡಿಸಿದೆ.
ನುಡಿದಂತೆ ನಡೆದು ಬದ್ಧತೆ ತೋರಿದ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ಮಾಡಿದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಅನುಕೂಲಗಳೇ ಹೆಚ್ಚು. ನೆರೆ ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತರಿಗೆ ಭಾರತದ ಆಶ್ರಯ ಸಿಗಲಿದೆ. ಹಿಂದೂ, ಸಿಖ್ಖ್, ಜೈನ, ಬೌದ್ಧ, ಪಾರ್ಸಿ, ಕ್ರಿಶ್ಚಿಯನ್ ಧರ್ಮೀಯರಿಗೆ ಆಸರೆಯಾಗಲಿದೆ ಎಂದು ತಿಳಿಸಿದೆ.
6 ವರ್ಷ ನೆಲೆಸಿದ್ದರೆ ಪೌರತ್ವ ಸಿಗಲಿದೆ
ಈ ಹಿಂದೆ 11 ವರ್ಷಗಳ ವರೆಗೂ ಪೌರತ್ವಕ್ಕಾಗಿ ವಲಸೆ ಬಂದವರು ಕಾಯಬೇಕಿತ್ತು. ಸಿಎಎ ಜಾರಿಯಿಂದಾಗಿ 6 ವರ್ಷ ನೆಲೆಸಿದ್ದರೆ ಪೌರತ್ವ ಸಿಗಲಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಬಂದ ಅಲ್ಪಸಂಖ್ಯಾತರಿಗೆ ನೆರವಾಗಲಿದೆ. ಒಂದೇ ಭಾರತ, ಶ್ರೇಷ್ಠ ಭಾರತ, ಅದೇ ವಿಶ್ವ ಗುರು ಭಾರತ ಎಂದು ಬಿಜೆಪಿ ಪೋಸ್ಟ್ ಮಾಡಿದೆ.