ಬೆಂಗಳೂರು : ಸಂಸದ ಡಿ.ಕೆ. ಸುರೇಶ್ ಅವರ ವಿರುದ್ಧ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಗ್ಯಾರಂಟಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರಕ್ಕೆ ಮೂರು ಹೆಸರು ಕಳುಹಿಸಲಾಗಿದೆ. ಪ್ರಬಲ ಅಭ್ಯರ್ಥಿ, ಆಶ್ಚರ್ಯ ಅಭ್ಯರ್ಥಿ ಕಣಕ್ಕಿಳಿಸೋದು ನಿಶ್ಚಿತ ಎಂದು ತಿಳಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಕಂಟ್ರೋಲ್ ಇಲ್ಲ. ಮಂತ್ರಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳ್ತಿದ್ದಾರೆ, ನಾನು ಹೇಳಿದ್ದು ಮಾತ್ರ ಅಧಿಕೃತ ಅಂತ. ಹಾಗೆ ಹೇಳಿದ್ರೆ ಅವರ ಮಾನ, ಮರ್ಯಾದೆ ಏನಾಗಬೇಕು? ಎಂದು ಕಿಡಿಕಾರಿದರು.
ವಿಪಕ್ಷ ಸ್ಥಾನದಲ್ಲಿ ಕೂರಲು ಟ್ರೈ ಮಾಡಬಹುದು ಅಷ್ಟೇ
ಲೋಕಸಭಾ ಚುನಾವಣೆಗೆ ಐದು ಗ್ಯಾರಂಟಿ ವಿಚಾರವಾಗಿ ಮಾತನಾಡಿ, ಇವ್ರು ಅಧಿಕಾರಕ್ಕೆ ಬಂದ್ರೆ ತಾನೆ ಗ್ಯಾರಂಟಿ ಕೊಡೋದು. ಒಂದು ಗ್ಯಾರಂಟಿ ಮಾತ್ರ ಕೊಡಬಹುದು. ವಿಪಕ್ಷ ಸ್ಥಾನದಲ್ಲಿ ಕೂರಲು ಟ್ರೈ ಮಾಡಬಹುದು ಅಷ್ಟೇ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಜುನಾಥ್ ಜೊತೆ ನಾನು ಮಾತನಾಡುತ್ತೇನೆ
ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಬಿಜೆಪಿಯಿಂದ ಸ್ಪರ್ಧೆ ಮಾಡ್ತಾರಾ? ಎಂಬ ಪ್ರಶ್ನೆಗೆ, ಇವತ್ತು ಶಾಸಕ ಮುನಿರತ್ನ ಆಯೋಜಿಸಿರುವ ಕಾರ್ಯಕ್ರಮಕ್ಕೆ ಮಂಜುನಾಥ್ ಬರ್ತಿದ್ದಾರೆ. ಅವರ ಜೊತೆ ನಾನು ಸಂಜೆ ಮಾತನಾಡುತ್ತೇನೆ ಎಂದು ಆರ್. ಅಶೋಕ್ ಹೇಳಿದರು.