ಹಾಸನ : ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿಮೈಸೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಂತೂ ಟಿಕೆಟ್ ಬೇಕು ಅಂತ ಕೇಳಲ್ಲ. ನಾನು ಆಕಾಂಕ್ಷಿ ಕೂಡ ಅಲ್ಲ ಎಂದು ಹೇಳಿದ್ದಾರೆ.
ಇನ್ನೂ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂದು ಪಕ್ಷದ ವರಿಷ್ಠರು ತೀರ್ಮಾನ ಮಾಡಿಲ್ಲ. ನನಗೂ ಏನು ಸೂಚನೆ ಕೊಟ್ಟಿಲ್ಲ. ವರಿಷ್ಠರು ಏನು ತೀರ್ಮಾನ ಮಾಡ್ತಾರೆ ನೋಡೋಣ. ವರಿಷ್ಠರು ಏನು ತೀರ್ಮಾನ ಮಾಡ್ತಾರೆ, ಅದಕ್ಕೆ ಎಲ್ಲರೂ ಕೂಡ ಬದ್ಧರಾಗಿರಬೇಕಾಗುತ್ತೆದೆ. ಆದರೆ, ಅವರು ಮೊದಲು ಹೇಳಲಿ ಎಂದು ತಿಳಿಸಿದ್ದಾರೆ.
ವರುಣ ಕ್ಷೇತ್ರ ಬಿಟ್ಟು ಹೋಗಲ್ಲ
ನಮ್ಮ ವರುಣ ಕ್ಷೇತ್ರದ ಜನ ವರುಣ ಕ್ಷೇತ್ರ ಬಿಟ್ಟು ಹೋಗಬೇಡಿ ಅಂತ ಹೇಳುತ್ತಿದ್ದಾರೆ. ವರುಣ ಕ್ಷೇತ್ರ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಬರುವುದಿಲ್ಲ. ಅದು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬರುತ್ತದೆ. ವರುಣ ಕ್ಷೇತ್ರದ ಜನ ರಾಜ್ಯ ರಾಜಕೀಯದಲ್ಲೇ ನೀವು ಇರಬೇಕು ಅಂತ ಹೇಳುತ್ತಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.