ನವದೆಹಲಿ : ಲೋಕಸಭಾ ಚುನಾವಣೆ ಟಿಕೆಟ್ ಘೋಷಣೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ಬಿಜೆಪಿ ನಾಯಕತ್ವ ಹಾಗೂ ಪಕ್ಷದ ಕಾರ್ಯಕರ್ತರಿಗೆ ಶಿರಬಾಗಿ ಕೃತಜ್ಞತಯೆ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಕಾಶಿಯ ಸಹೋದರ, ಸಹೋದರಿಯರಿಗೆ ಮೂರನೇ ಬಾರಿ ಸೇವೆ ಮಾಡಲು ನಾನು ಸಿದ್ಧನಿದ್ದೇನೆ. ಜನರ ಆಶೋತ್ತರ ಈಡೇರಿಸಲು 2014ರಲ್ಲಿ ಕಾಶಿಗೆ ಬಂದಿದ್ದೆನು. ಕಳೆದ 10 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದು, ಜನಸೇವೆ ಮುಂದುವರಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
3ನೇ ಬಾರಿ ವಾರಣಾಸಿಯಿಂದ ಸ್ಪರ್ಧೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಿಕೆಟ್ ಘೋಷಿಸಲಾಗಿದ್ದು, ಮೂರನೇ ಬಾರಿಯೂ ಉತ್ತರ ಪ್ರದೇಶದ ವಾರಣಾಸಿಯಿಂದಲೇ ಅವರು ಕಣಕ್ಕಿಳಿಯಲಿದ್ದಾರೆ.
ಮೋದಿ ಸ್ಪರ್ಧೆ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?
ಮೋದಿ ಮತ್ತೆ ವಾರಣಾಸಿ ಕ್ಷೇತ್ರದಿಂದಲೇ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಕುರಿತು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ರೈ ಪ್ರತಿಕ್ರಿಯಿಸಿದ್ದಾರೆ. ವಾರಣಾಸಿಯು ಕಾಂಗ್ರೆಸ್ನ ಸಂಪ್ರದಾಯಬದ್ಧ ಕ್ಷೇತ್ರವಾಗಿತ್ತು. ಇಡೀ ಬನಾರಸ್ ಕಾಂಗ್ರೆಸ್ ಬಳಿಯೇ ಇತ್ತು. ನಮ್ಮ ಅವಧಿಯಲ್ಲಿ ಪಾನ್ ಮತ್ತು ಸೀರೆಗಳ ಮೇಲೆ ತೆರಿಗೆ ವಿಧಿಸಲಾಗುತ್ತಿರಲಿಲ್ಲ. ಆದರೆ, ಈಗ ಪಾನ್ ಮೇಲೂ ತೆರಿಗೆ ಹಾಕುತ್ತಿರುವುದು ವಿಪರ್ಯಾಸ ಎಂದು ಕುಟುಕಿದ್ದಾರೆ.