ವಿಜಯಪುರ : ಸ್ಪೀಕರ್ ಯು.ಟಿ. ಖಾದರ್ ನಿಜವಾದ ದೇಶಪ್ರೇಮಿ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕಿದವರಿಗೆ ಬೇಕಾದ ಶಬ್ಧದಲ್ಲಿ ಬೈಯ್ಯೋಕೆ ಹೇಳಿದ್ರು ಎಂದು ಯು.ಟಿ. ಖಾದರ್ ಅವರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಡಿ ಹೊಗಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥವರು ಎಲ್ಲೆಲ್ಲೋ ಒಬ್ಬರು ದೇಶಪ್ರೇಮಿಗಳಿದ್ದಾರೆ. ಪಾಕ್ ಮೇಲೆ ಪ್ರೀತಿ ಇದ್ದವರು ಹೋಗಲಿ, ನಾವು ಹಿಂದೂಗಳು, ದಲಿತರು ಆನಂದವಾಗಿ ಇರುತ್ತೇವೆ ಎಂದು ಹೇಳಿದರು.
ಮಹಾತ್ಮಾ ಗಾಂಧಿ, ನೆಹರು ಕೊಟ್ಟಿದ್ದಾರೆ ಅಲ್ಲಿಗೆ ಹೋಗಿ, ಇಲ್ಲಿ ಇರುವ ಅವಶ್ಯಕತೆ ಇಲ್ಲ. ಇಲ್ಲಿನ ಅನ್ನ ತಿಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವವರು ಅಲ್ಲಿ ಹೋಗ್ರಿ ಮಕ್ಕಳಾ..! ಕರ್ನಾಟಕ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಎನಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಬಾಂಬ್ ಬೆಂಗಳೂರು‘ ಆಗತ್ತೆ ಅಂತ ಹೇಳಿದ್ದೆ
ಪಾಕಿಸ್ತಾನ ಪರ ಘೋಷಣೆ ಆದಾಗಲೇ ಇದನ್ನು ನಾವು ಹೇಳಿದ್ದೆವು. ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆ ಇಂಬು ಕೊಡುತ್ತಿದೆ. ಇದು ಹಿಂದೂಗಳ ಕೃತ್ಯ ಅಲ್ಲ, ಇದಂತು ಸ್ಪಷ್ಟ. ಬ್ರ್ಯಾಂಡ್ ಬೆಂಗಳೂರು ಮಾಡಿದಾಗಲೇ ಇದು ‘ಬಾಂಬ್ ಬೆಂಗಳೂರು’ ಆಗತ್ತೆ ಅಂತ ಹೇಳಿದ್ದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಲಿಲ್ಲ. ಭಯೋತ್ಪಾದನೆ ನಿಲ್ಲಿಸಲು ಆಗದಿದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಹರಿಹಾಯ್ದರು.