ಧಾರವಾಡ: ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯೇ ಇಬ್ಬರು ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.
ಸಾವಿತ್ರಿ ಸರಕಾರ (32) ಎಂಬವರೇ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡವರು.
ಐದು ವರ್ಷದ ಮಗಳು ಸುಮಾ ಮತ್ತು ನಾಲ್ಕು ವರ್ಷದ ಮಗು ದರ್ಶನ್ ತಾಯಿಯ ಕೈಯಿಂದಲೇ ಕೊಲೆಯಾದ ದುರ್ದೈವಿ ಮಕ್ಕಳು. ಮಕ್ಕಳನ್ನು ಕೊಂದ ಬಳಿಕ ಆಕೆ ತಾನೇ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ರೀತಿ ತಾಯಿಯೊಬ್ಬಳು ಮಕ್ಕಳನ್ನು ಕೊಂದು ತಾನೂ ಪ್ರಾಣ ಕಳೆದುಕೊಳ್ಳಲು ಕಾರಣವಾದ ಅಂಶ ಏನು ಎನ್ನುವುದು ತಿಳಿದುಬಂದಿಲ್ಲ. ಸ್ಥಳಕ್ಕೆ ನವಲಗುಂದ ಪೋಲಿಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.