Friday, May 17, 2024

ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ : ಮಾಜಿ ಪಾಲಿಕೆ ಸದಸ್ಯನ ವಿರುದ್ದ ದೂರು!

ಬೆಂಗಳೂರು : ಮಾಜಿ ಸಚಿವ ಕೆ.ಗೋಪಾಲಯ್ಯ ಅವರಿಗೆ ಮಾಜಿ ಪಾಲಿಕೆ ಸದಸ್ಯರೊಬ್ಬರು ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್​ ಆಯುಕ್ತರ ಕಚೇರಿಗೆ ಮತ್ತು ಸ್ಪೀಕರ್​ ಯು.ಟಿ ಖಾದರ್​ ಅವರಿಗೆ ಗೋಪಾಲಯ್ಯ ಲಿಖಿತ ರೂಪದಲ್ಲಿ ದೂರನ್ನು ದಾಖಲಿಸಿದ್ದಾರೆ.

ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ನಡೆಯುತ್ತಿರುವ ಕಾರಣ ಸ್ಪೀಕರ್ ವ್ಯಾಪ್ತಿಯೊಳಗೆ ವಿಧಾನಸಭೆ ಸದಸ್ಯರು ಬರುತ್ತಾರೆ. ಈ ಹಿನ್ನಲೆಯಲ್ಲಿ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಗೋಪಾಲಯ್ಯ ಅವರು ಸ್ಪೀಕರ್ ಯು.ಟಿ ಖಾದರ್ ಅವರಲ್ಲಿ ಮನವಿ ಮಾಡಿದ್ದಾರೆ.

ದೂರಿನ ಪತ್ರದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಪದ್ಮರಾಜು ಎಸ್, ಅವರು ಮಂಗಳವಾರ ರಾತ್ರಿ ಸುಮಾರು 11.00 ಗಂಟೆಗೆ ಮೊಬೈಲ್ ಮುಖಾಂತರ ನನಗೆ ಕರೆ ಮಾಡಿ. ನನಗೆ ಮತ್ತು ನನ್ನ ಕುಟುಂಬಕ್ಕೆ ಅವ್ಯಾಚ್ಯ ಶಬ್ದಗಳಿಂದ ಬೈಯ್ದಿದ್ದಲ್ಲದೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ನಿರ್ನಾಮ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.

ಇದನ್ನೂ ಓದಿ: ಅರಬ್ಬರ ನಾಡಿನಲ್ಲಿ ಪ್ರಧಾನಿ ಮೋದಿ ಹವಾ!

ಅವರ ಮತ್ತು ನನ್ನ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿರುವುದಿಲ್ಲ. ಆದರೂ ಸಹ ನನಗೆ ಕರೆ ಮಾಡಿ. ಹಣವನ್ನು ನೀಡುವಂತೆ ಒತ್ತಾಯ ಮಾಡಿದ್ದಲ್ಲದೆ, ಹಣವನ್ನು ನೀಡದೇ ಹೋದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ, ನನ್ನ ಕಡೆಯ ಹುಡುಗರನ್ನು ಕಳಿಸಿ, ನಿನ್ನ ಇಡೀ ಕುಟುಂಬವನ್ನು ಕೊಲೆ ಮಾಡಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.

ನನಗೆ ನನ್ನ ಕುಟುಂಬಕ್ಕೆ ಇನ್ನು ಮುಂದೆ ಯಾವುದೇ ರೀತಿಯ ಹಾನಿ ಅಥವಾ ತೊಂದರೆ ಉಂಟಾದರೆ  ಪದ್ಮರಾಜು. ಎಸ್ ಇವರೇ ಕಾರಣರಾಗಿರುತ್ತಾರೆ. ಈ ಸಂಬಂಧ ನಾನು 13.02.2024 ರಂದು ರಾತ್ರಿ 11.30 ಗಂಟೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತೇನೆ. ಈ ನಿಟ್ಟಿನಲ್ಲಿ ಪದ್ಮರಾಜು ಎಸ್. ಇವರನ್ನು ಕೂಡಲೇ ವಿಚಾರಣೆ ನಡೆಸಿ ಅವರನ್ನು ಗಡೀಪಾರು ಮಾಡಬೇಕೆಂದು ಕೋರುತ್ತೇನೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಹಾಗೂ ನನ್ನ ಮತ್ತು ನನ್ನ ಕುಟುಂಬದ ರಕ್ಷಣೆಗೆ ಬೆಂಗಾವಲು ಪಡೆ ಅಗತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES