ರಾಮನಗರ : ಮನೆಯಿಂದ ಕಾಣೆಯಾಗಿದ್ದ ಪತಿ. ಗಂಡನನ್ನು ಹುಡುಕಿಕೊಡಿ ಎಂದು ಪೊಲೀಸ್ ಕಂಪ್ಲೆಂಟ್ ಸಹ ಕೊಟ್ಟಿದ್ಲು ಪತ್ನಿ. ಆದರೆ, ಮನೆಯಿಂದ ಹೊರ ಹೋದ ಪತಿ ಹೆಣ್ಣಾಗಿ ಪ್ರತ್ಯಕ್ಷ್ಯವಾಗಿದ್ದಾನೆ.
ಇದು ಸಿನಿಮಾದ ದೃಶ್ಯ. ನಟ ಸಂಚಾರಿ ವಿಜಯ್ ನಟಿಸಿದ್ದ ನಾನು ಅವನಲ್ಲ ಅವಳು ಸಿನಿಮಾದ ತುಣುಕು. ಈ ಸಿನಿಮಾದಲ್ಲಿನ ನಟನೆಗಾಗಿ ವಿಜಯ್ಗೆ ರಾಷ್ಟ್ರಪ್ರಶಸ್ತಿ ಸಹ ಬಂದಿತ್ತು. ಇದೀಗ ಈ ಸಿನಿಮಾದ ಕಥೆಯನ್ನೇ ಮೀರಿಸುವಂತ ಘಟನೆಯೊಂದು ರಾಮನಗರದಲ್ಲಿ ನಡೆದಿದೆ.
ಕಾಣೆಯಾಗಿದ್ದ ಪತಿ ಹೆಣ್ಣಾಗಿ ಹಿಂತಿರುಗಿದ್ದನ್ನ ಕಂಡು ಪತ್ನಿ ಶಾಕ್ ಆಗಿದ್ದಾಳೆ. ಮನುಷ್ಯ ಸಾಲದ ಸುಳಿಗೆ ಸಿಲುಕಿ ಜೀವನದಲ್ಲಿ ಜಿಗುಪ್ಸೆ, ಖಿನ್ನತೆಗೆ ಒಳಾಗದ್ರೆ ಎಂತಹ ಪರಿಸ್ಥಿತಿಗೆ ಬೇಕಾದ್ರೂ ಹೋಗ್ತಾನೆ ಅನ್ನೋದಕ್ಕೆ ಈ ಸ್ಟೋರಿ ಸಾಕ್ಷಿ.
ರಾಮನಗರ ಮೂಲದ ಲಕ್ಷ್ಮಣ್ ರಾಬ್ ಎಂಬಾತ ಸಾಲದ ಸುಳಿಗೆ ಸಿಲುಕಿ 2017 ರಲ್ಲಿ ಮನೆ ಬಿಟ್ಟು ಹೋಗಿದ್ರು. ಈ ಸಂಬಂಧ ಕುಟುಂಬಸ್ಥರು ಐಜೂರು ಪೋಲಿಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ರು. ಕೇಸ್ ದಾಖಲಿಸಿಕೊಂಡ ಪೊಲೀಸರಿಗೆ ಅದೊಂದು ಸನ್ಮಾನ ಕಾರ್ಯಕ್ರಮ ಕಣ್ಣಿಗೆ ಬಿದ್ದಿತ್ತು. ಬಿಗ್ಬಾಸ್ ಸ್ಪರ್ಧಿ ನೀತು ಅವರಿಗೆ ತೃತೀಯ ಲಿಂಗಿ ಸಮುದಾಯದವರು ಸನ್ಮಾನ ನಡೆಸಿದ್ರು. ಈ ಗುಂಪಿನಲ್ಲಿ ಲಕ್ಷ್ಮಣ್ ರಾವ್ ಹೋಲುವ ವ್ಯಕ್ತಿ ಕಾಣಿಸಿಕೊಂಡಿದ್ರು.
ನಾನು ಲಕ್ಷಣ್ ಅಲ್ಲ, ವಿಜಯಲಕ್ಷ್ಮಿ
ವಿಚಾರಿಸಿದಾಗ ನಾನು ಲಕ್ಷಣ್ ಅಲ್ಲ. ವಿಜಯಲಕ್ಷ್ಮಿ ಎಂದು ಹೇಳಿಕೊಂಡಿದ್ರು. ಆದರೆ, ಲಕ್ಷ್ಮಣ್ ಎಂದು ಕರೆದಾಗ ರಿಯಾಕ್ಟ್ ಮಾಡಿದ್ದಾರೆ. ಇವರೇ ಲಕ್ಷ್ಮಣ್ ಎಂದು ಕನ್ಫಮ್ ಆದ ಪೊಲೀಸರು ಪತ್ನಿಗೆ ಮಾಹಿತಿ ನೀಡಿದ್ದಾರೆ. ಹೆಣ್ಣಾಗಿ ಬದಲಾದ ಪತಿಯನ್ನು ಪೊಲೀಸ್ ಠಾಣೆಯಲ್ಲಿ ಕಂಡ ಪತ್ನಿ ತಲೆ ಸುತ್ತಿ ಬಿದ್ದಿದ್ದಾಳೆ. ತಂದೆಯ ಅವತಾರ ಕಂಡು ಮಕ್ಕಳು ಕಕ್ಕಾಬಿಕ್ಕಿಯಾಗಿದ್ರು.
2017ರಲ್ಲಿ ಮನೆ ಬಿಟ್ಟ ಲಕ್ಷ್ಮಣ್
ಇನ್ನು ಲಕ್ಷ್ಮಣ್ ಜೀವನದಲ್ಲಿ ಜಿಗುಪ್ಸೆಗೊಂಡು ಖಿನ್ನತೆಗೆ ಒಳಗಾಗಿದ್ದು, ಪದೇಪದೆ ಮನೆ ಬಿಟ್ಟು ಹೋಗಿದ್ದರಂತೆ. ಮನೆ ಮಂದಿ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ರಂತೆ. ಆದರೆ, 2017ರಲ್ಲಿ ಮನೆ ಬಿಟ್ಟ ಲಕ್ಷ್ಮಣ್ ಮೈಸೂರಿಗೆ ತೆರಳಿ ತೃತೀಯ ಲಿಂಗಿಗಳ ಜೊತೆ ಸೇರಿ ಲಿಂಗಪರಿವರ್ತನೆ ಮಾಡಿಸಿಕೊಂಡು ಜೀವನ ಮಾಡ್ತಿದ್ರು. ಸಾಲದ ಸುಳಿಗೆ ಸಿಲುಕಿ ಲಕ್ಷ್ಮಣ್ ಹೆಣ್ಣಾಗಿ ಬದಲಾಗಿದ್ರಂತೆ. ಇದೀಗ ನಾನು ಕುಟುಂಬಸ್ಥರ ಜೊತೆ ತೆರಳುವುದಿಲ್ಲ. ತೃತೀಯ ಲಿಂಗಿಗಳ ಜೊತೆಯಲ್ಲೇ ಇರ್ತೀನಿ ಎಂದು ಹೇಳಿದ್ದು, ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು ನಾಪತ್ತೆ ಕೇಸ್ ಕ್ಲೋಸ್ ಮಾಡಿದ್ದಾರೆ.
ಖುಷಿ ಪಡಬೇಕೋ? ದುಖಃ ಪಡಬೇಕೋ?
ಕಾಣೆಯಾದ ಪತಿ ಮತ್ತೆ ಪತ್ತೆಯಾದ್ರು ಎಂದು ಖುಷಿ ಪಡಬೇಕೋ ಅಥವಾ ಅವರ ಹೊಸ ಅವತಾರ ಕಂಡು ದುಖಃ ಪಡಬೇಕೋ ಎಂಬುದು ಕುಟುಂಬಸ್ಥರಿಗೆ ತೋಚದಾಗಿದೆ. ಗಂಡನೇ ಆಧಾರವಾಗಬೇಕಿದ್ದ ಕುಟುಂಬದಲ್ಲಿ ಬರಸಿಡಿಲು ಬಡಿದಂತಾಗಿದೆ.