ಬೆಂಗಳೂರು : ಪಾಪ ವಯಸ್ಸಾದ ಕಾಲದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಮನೆಯಲ್ಲಿ ಇಂತಹ ನೋವು ಕೊಟ್ಟಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಹೆಚ್ಡಿಕೆ ಕೇಸರಿ ಶಾಲು ಧರಿಸಿದ ವಿಚಾರ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಬಿಜೆಪಿಯ ಸ್ಪೋಕ್ಸ್ ಪರ್ಸನ್ (ವಕ್ತಾರ) ಆಗಿದ್ದಾರೆ. ಮನುಷ್ಯನ ಸಿದ್ಧಾಂತ ಚೇಂಜ್ ಆದಾಗ, ಅವ್ರು ಏನೇ ಹೇಳಿದ್ರೂ ಪ್ರಸಾದ ಅಂತ ಸ್ವೀಕಾರ ಮಾಡ್ತೀನಿ ಎಂದು ಕುಟುಕಿದರು.
ದೇವೇಗೌಡರ ಸಿದ್ಧಾಂತವನ್ನು ಹತ್ತಿರದಿಂದ ನೋಡಿದ್ದೇನೆ. ನಮಗೂ ಮಕ್ಕಳಿದ್ದಾರೆ, ವಯಸ್ಸಾದ ಕಾಲದಲ್ಲಿ ಏನಾಗುತ್ತೋ, ಏನೋ..? ನನಗೆ ಈಗಲೇ ಭಯವಾಗುತ್ತಿದೆ. ಅಸೆಂಬ್ಲಿಯಲ್ಲಿ ನೋಡಿದ್ರಲ್ಲಾ.. ಯಾರು ಯಾರಿಗೆ ಕಲ್ಲು ಹೊಡೆದ್ರು ಅಂತ. ನನ್ನ ಬಳಿ ಅವರದ್ದು ದೊಡ್ಡ ಪಟ್ಟಿಯೇ ಇದೆ ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬ ಕಲಹ ಬಗ್ಗೆ ಕೆದಕಿದರು.
ಶೇ.45 ರಷ್ಟು ಬಜೆಟ್ ಗಾತ್ರ ಕಡಿಮೆ ಆಗ್ತಿದೆ
ಕರ್ನಾಟಕ ಇಡೀ ದೇಶದಲ್ಲಿ ಪ್ರೊಗ್ರೆಸಿವ್ ರಾಜ್ಯ. ಮಹಾರಾಷ್ಟ್ರ ಬಿಟ್ರೆ ಕರ್ನಾಟಕ ಹೆಚ್ಚು ತೆರಿಗೆ ಕೊಡ್ತಾ ಇದೆ. ಐದು ವರ್ಷದ ಬಜೆಟ್ ಅನ್ನೂ ಗಮನಿಸಬೇಕು. ನಮಗೆ ನ್ಯಾಯಯುತ ಪಾಲು ಸಿಗಲಿಲ್ಲ. 26 ಗೆದ್ದಿದ್ರು, ಎನ್ಡಿಎಗೆ ಇನ್ನೊಬ್ರು ಸೇರಿಕೊಂಡ್ರು. ಆದ್ರೂ ನ್ಯಾಯ ಸಿಗಲಿಲ್ಲ. 2018ಕ್ಕೆ ಹೋಲಿಕೆ ಮಾಡಿದ್ರೆ ಶೇ.40ರಿಂದ 45 ರಷ್ಟು ಬಜೆಟ್ ಗಾತ್ರ ಕಡಿಮೆ ಆಗ್ತಿದೆ ಎಂದು ಹೇಳಿದರು.