Saturday, May 18, 2024

ದ್ರೌಪದಿ ಮುರ್ಮುಗೆ ಏಕವಚನ ಬಳಕೆ : ಸಿದ್ದರಾಮಯ್ಯ ವಿರುದ್ಧ ಶಾಸಕ ಯತ್ನಾಳ್ ಕಿಡಿ

ವಿಜಯಪುರ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲೇ ಸಂಬೋಧಿಸಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಚಿತ್ರದುರ್ಗದಲ್ಲಿ ನಡೆದ ಶೋಷಿತ ವರ್ಗಗಳ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದ ಮೂಲಕ ಮಾತಾಡಿರುವುದು ದೊಡ್ಡ ಪ್ರಮಾದವಾಗಿದೆ ಎಂದು ಬೇಸರಿಸಿದ್ದಾರೆ.

ಹಿಂದುಳಿದ ವರ್ಗದ ಮಹಿಳೆ ಹಾಗೂ ದೇಶದ ಮೊದಲ ಪ್ರಜೆಯನ್ನು ಏಕವಚನದಲ್ಲಿ ಕರೆಯುವುದು ಇವರ ಹಾಗೂ ಇವರ ಪಕ್ಷದ ಸಂಸ್ಕಾರ ತೋರಿಸುತ್ತದೆ. ಮಹಿಳೆಯರ ಮೇಲೆ, ರಾಷ್ಟ್ರಪತಿಗಳ ಮೇಲೆ ಪ್ರಜಾಪ್ರಭುತ್ವದ ಮೇಲೆ ಸ್ವಲ್ಪವಾದರೂ ಗೌರವ ಇದ್ದರೆ ಸಿದ್ದರಾಮಯ್ಯನವರು ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಯೋಧ್ಯೆಯಲ್ಲಿ ನಡೆದ ಎಲ್ಲ ಕಾರ್ಯಕ್ರಮ ಹಾಗೂ ಅತಿಥಿಗಳ ಆಹ್ವಾನದ ಜವಾಬ್ದಾರಿ ಇದಿದ್ದು ರಾಮ ಜನ್ಮಭೂಮಿಯ ಟ್ರಸ್ಟ್ ನವರೇ ಹೊರತು ಪ್ರಧಾನಿ ಮೋದಿ ಜಿ ಅವರಾಗಲಿ ಉತ್ತರ ಪ್ರದೇಶದ ರಾಜ್ಯ ಸರ್ಕಾರದ್ದಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಕನಿಷ್ಠ ಸಾಮಾನ್ಯ ಜ್ಞಾನವಿಲ್ಲ

ತಮ್ಮ ವೀರಾವೇಶದ ಭಾಷಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಯೋಧ್ಯೆಯಲ್ಲಿ ನಡೆದ ಬಾಲರಾಮ ದೇವರ ಪ್ರಾಣಪ್ರತಿಷ್ಠಾಪನೆಗೂ ಕರೆದಿಲ್ಲ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ನಡೆದ ಬಾಲರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಸರ್ಕಾರೇತರ ಕಾರ್ಯಕ್ರಮ ಎಂಬ ಕನಿಷ್ಠ ಸಾಮಾನ್ಯ ಜ್ಞಾನ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES