Tuesday, September 17, 2024

Bigg Boss Kannada: ಬಿಗ್‌ಬಾಸ್ ಮನೆಯಲ್ಲಿ ವಿನಯ್-ಪ್ರತಾಪ್‌ ವಾಗ್ಯುದ್ಧ

ಬೆಂಗಳೂರು: ಸಾಮಾನ್ಯವಾಗಿ ಬಿಗ್​ ಬಾಸ್​ ಮನೆಯೊಳಗೆ ಪ್ರತಿಸ್ಪರ್ಧಿಗಳ ಟೀಕೆಗಳಿಗೆ ಸಮಾಧಾನದಿಂದ ಉತ್ತರಿಸುತ್ತಿದ್ದ ಡ್ರೋಣ್ ಪ್ರತಾಪ್​ ಈ ಬಾರಿ ವಿನಯ್​ ಮಾತುಗಳಿಗೆ ಏರುಧ್ವನಿಯಲ್ಲಿ ಮರುತ್ತರ ನೀಡಿದ್ದಾರೆ.

ಹೌದು,ಹದಿಮೂರು ವಾರಗಳ ಸುದೀರ್ಘ ಅವಧಿ ಕಳೆದು ಹದಿನಾಲ್ಕನೇ ವಾರಕ್ಕೆ ಬಿಗ್‌ಬಾಸ್ ಕನ್ನಡ ಕಾಲಿಟ್ಟಿದೆ. ಕಳೆದ ವಾರ ಮೈಕಲ್‌ ಅವರೂ ಎಲಿಮಿನೇಟ್ ಆಗಿದ್ದಾರೆ. ಹದಿನಾಲ್ಕನೇ ವಾರದ ಆರಂಭ ಬಿಸಿಬಿಸಿಯಾಗಿಯೇ ಆರಂಭವಾಗಿದೆ. ಜೀಯೋ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಇದರ ಸುಳಿವು ದೊರಕಿದೆ.

ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವಿನಯ್‌, ಪ್ರತಾಪ್ ವಿರುದ್ಧ ಹರಿಹಾಯ್ದಿದ್ದಾರೆ. ‘ಅಮಾಯಕನ ಹಾಗೆ ವೇಷ ಹಾಕಿಕೊಂಡು, ಎಲ್ಲರಿಗೂ ಬೂದಿ ಎರೆಚಿಕೊಂಡು ಇರುವುದೆಂದರೆ ಅದು ಪ್ರತಾಪ್’ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಇಂಥ ಟೀಕೆಗಳಿಗೆ ತಣ್ಣಗೇ ಉತ್ತರಿಸುತ್ತಿದ್ದ ಡ್ರೋಣ್ ಪ್ರತಾಪ್ ಕೂಡ ಈ ಬಾರಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಧ್ವನಿ ಎತ್ತರಿಸಿ ವಿನಯ್‌ ವಿರುದ್ಧ ಮಾತಾಡಿದ್ದಾರೆ.

‘ನೀವು ಅಂದಹಾಗೆಲ್ಲ ಅನ್ನಿಸಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ. ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಮಾರುತ್ತರ ನೀಡಿದ್ದಾರೆ.

ವಿನಯ್, ‘ನೀನು ಆಡ್ತಿರೋ ನಾಟಕ ನಂಗೆ ಗೊತ್ತಿಲ್ವೇನೋ? ಏನೋ ಮಾಡ್ತೀಯಾ ನೀನು?’ ಎಂದು ಕೂಗಾಡಿದ್ದಾರೆ.
ಪ್ರತಾಪ್ ಕೂಡ ಅಷ್ಟೇ ದೊಡ್ಡದಾಗಿ, ‘ನೀಟಾಗಿ ಮಾತಾಡೋದು ಕಲ್ತುಕೊಳ್ಳಿ. ನಾನು ಮಾತುಗಳ ಮುಖಾಂತರ ಉತ್ತರ ಕೊಡ್ತೀನಿ’ ಎಂದು ಹೇಳಿದ್ದಾರೆ.
ವಿನಯ್, ‘ನೀನು ನನಗೆ ಹೇಳಿಕೊಡಬೇಕಾಗಿಲ್ಲ. ಹೋಗಲೇ’ ಎಂದಿದ್ದಾರೆ. ಸಂಗೀತಾ ಮತ್ತು ತುಕಾಲಿ ಸಂತೋಷ್‌ ಎಲ್ಲರೂ ಸೇರಿಕೊಂಡು ಜಗಳ ತಪ್ಪಿಸಲು ಯತ್ನಿಸುತ್ತಿರುವ ದೃಶ್ಯವೂ ಪ್ರೋಮೊದಲ್ಲಿ ಸೆರೆಯಾಗಿದೆ.

ಹಾಗಾದರೆ ಈ ವಾರ ವಿನಯ್ ಮತ್ತು ಪ್ರತಾಪ್‌ ನಡುವಿನ ಯುದ್ಧಕ್ಕೆ ಸಾಕ್ಷಿಯಾಗಲಿದೆಯಾ? ಹಾಗಾದದಲ್ಲಿ ಉಳಿದ ಸದಸ್ಯರು ಯಾರ ಪರ ನಿಂತುಕೊಳ್ಳುತ್ತಾರೆ? ಫಿನಾಲೆಗೆ ಕೆಲವೇ ಹೆಜ್ಜೆಗಳ ದೂರದಲ್ಲಿರುವಾಗ ಮತ್ತೆ ಏರುತ್ತಿರುವ ಕಾವು ಮನೆಯ ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲಿದೆ?
ಈ ಎಲ್ಲವನ್ನೂ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES