Monday, May 13, 2024

ಕೆಆರ್‌ಎಸ್‌ನಿಂದ 30 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡುವಂತಿಲ್ಲ; ಹೈಕೋರ್ಟ್‌ ಆರ್ಡರ್‌

ಬೆಂಗಳೂರು: ಕೆಆರ್‌ಎಸ್‌ ಸುತ್ತಮುತ್ತ 30 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು ಎಂದು ಕರ್ನಾಟಕ ಹೈಕೋರ್ಟ್​ ಮಹತ್ವದ ಆದೇಶ ನೀಡಿದೆ.

ಈ ಮೂಲಕ ಕೆಆರ್​ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು ಎಂದು ಹೋರಾಟ ನಡೆಸುತ್ತಿದ್ದ ಸಂಸದೆ ಸುಮಲತಾ ಅಂಬರೀಶ್​ಗೆ ಭಾರಿ ಖುಷಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಆದೇಶನೀಡಿದೆ.

ಕಳೆದ ಕೆಲವು ವರ್ಷಗಳಿಂದ ಮಂಡ್ಯ ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಅದರಿಂದ ಕೆ.ಆರ್‌.ಎಸ್‌ ಅಣೆಕಟ್ಟಿಗೆ ಆಗಬಹುದಾದ ಹಾನಿಗೆ ಸಂಬಂಧಿಸಿ ಭಾರಿ ವಾದ ವಿವಾದಗಳು ನಡೆದಿದ್ದವು. ಕೆ.ಆರ್‌.ಎಸ್‌ನಿಂದ ಈಗಾಗಲೇ ಬಿರುಕು ಬಿಟ್ಟಿದೆ. ಇನ್ನಷ್ಟು ಗಣಿಗಾರಿಕೆ ನಡೆಸಿದರೆ ಇದರಿಂದ ಅಪಾಯ ಉಂಟಾಗಲಿದೆ ಎಂದು ಅವರು ಹೇಳಿದ್ದರು. ಇದರ ಬಗ್ಗೆ ಪರ-ವಿರೋಧ ಹೋರಾಟಗಳು ತಾರಕಕ್ಕೇರಿದಾಗ ಮಂಡ್ಯ ಜಿಲ್ಲಾಧಿಕಾರಿಗಳು ಹೊಸ ಪರವಾನಗಿ ನೀಡಲು ಷರತ್ತುಗಳನ್ನು ವಿಧಿಸಿದ್ದರು.

ಭೂಪರಿವರ್ತನೆಗೂ ಮುನ್ನ ಪರೀಕ್ಷಾರ್ಥ ಸ್ಫೋಟ ನಡೆಸಿ ಹಾನಿ ಸಾಧ್ಯತೆಯನ್ನು ಪರಿಶೀಲಿಸಿದ ಬಳಿಕವೇ ಗಣಿಗಾರಿಕೆಗೆ ಅನುಮತಿ ನೀಡುವ ಷರತ್ತನ್ನು ಜಿಲ್ಲಾಧಿಕಾರಿಗಳು ವಿಧಿಸಿದ್ದರು. ಜಿಲ್ಲಾಧಿಕಾರಿ ಷರತ್ತು ವಿಧಿಸಿರುವುದನ್ನ ಪ್ರಶ್ನಿಸಿ ಗಣಿ ಮಾಲೀಕರು ಹೈಕೋರ್ಟ್‌ಗೆ ದಾವೆ ಸಲ್ಲಿಸಿದ್ದರು.

 

ಅದರ ವಿಚಾರಣಗೆ ವಿಭಾಗೀಯ ಪೀಠದಲ್ಲಿ ನಡೆದು ಈಗ ಕೆ.ಆರ್‌ಎಸ್‌ನ 20 ಕಿಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ʻʻ ಕೆಆರ್‌ಎಸ್‌ ಜಲಾಶಯಕ್ಕೆ ಹಾನಿ ಮಾಡುವುದು ತಡೆಗಟ್ಟಬೇಕಿದೆ. ಇಲ್ಲಿ ಕೆಆರ್‌ಎಸ್‌ ಸುರಕ್ಷತೆ ಮುಖ್ಯವಾಗಿದೆʼʼ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಮತ್ತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಸರ್ಕಾರದ ನಿರ್ದೇಶನದಂತೆ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಲಾಗಿದೆ. ಹೀಗಾಗಿ, ಅಲ್ಲಿಯವರೆಗೆ ಗಣಿಗಾರಿಕೆಗೆ ಅನುಮತಿಸುವುದಿಲ್ಲʼʼ ಎಂದು ಹೇಳಿತು

ನ್ಯಾಯಪೀಠ ಹೇಳಿದ್ದೇನು..?

ಕೆಆರ್​​​​ಎಸ್ ಡ್ಯಾಂ ನಿರ್ಮಾಣಕ್ಕೆ ಜನರು ರಕ್ತ, ಬೆವರು ಹರಿಸಿದ್ದಾರೆ. ತೀ.ತಾ. ಶರ್ಮ ಅವರು ಸರ್.ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಬರೆದ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಕೆಆರ್​​​​ಎಸ್​ಗೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ. ಮೂರು ರಾಜ್ಯಗಳು ಕಾವೇರಿ ನೀರಿಗಾಗಿ ಹೋರಾಡುತ್ತಿವೆ. ಆದರೆ ಕೆಆರ್​​​​ಎಸ್ ಅಣೆಕಟ್ಟೆ ಸಂರಕ್ಷಣೆಗೆ ಪ್ರಯತ್ನಿಸುತ್ತಿಲ್ಲ. ಅಣೆಕಟ್ಟೆಗೆ ತೊಂದರೆಯಾದರೆ ಆಗುವ ಅನಾಹುತಗಳ ಅರಿವಿದೆಯೇ? ಅಣೆಕಟ್ಟೆಗೆ ತೊಂದರೆಯಾದರೆ ಇಡೀ ರಾಜ್ಯಕ್ಕೇ ಗಂಭೀರ ಆಪತ್ತು ಬರಲಿದೆ. ಹೀಗಾಗಿ ಕೆಆರ್​​​​ಎಸ್ ಅಣೆಕಟ್ಟೆ ಬಳಿ ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಸಂಸದೆ ಸುಮಲತಾ ಸ್ವಾಗತ

ಹೈಕೋರ್ಟ್​ ತೀರ್ಪು ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಸಂಸದೆ ಸುಮಲತಾ ಅಂಬರೀಶ್ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಕೆಆರ್​ಎಸ್ ಸುತ್ತಮುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿ ಹೊರಡಿಸಿರುವ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದ ಆದೇಶ ಅತ್ಯಂತ ಸೂಕ್ತವಾಗಿದೆ. ಇಂಥದ್ದೊಂದು ಮಹತ್ವದ ಆದೇಶವನ್ನು ನೀಡಿರುವ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಪಿ.ಬಿ.ವರಾಳೆ ಹಾಗೂ ಕೃಷ್ಣ.ಎಸ್. ದೀಕ್ಷಿತ್​ಗೆ ಧನ್ಯವಾದಗಳನ್ನು ಅರ್ಪಿಸುವೆ. ಕೆ.ಆರ್.ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು ಎನ್ನುವ ನನ್ನ ಬಹುದಿನದ ಹೋರಾಟಕ್ಕೆ ಈ ಆದೇಶ ಮತ್ತಷ್ಟು ಬಲ ತಂದಿದೆ. ನಾವೆಲ್ಲರೂ ಕೆ.ಆರ್.ಎಸ್ ಅನ್ನು ಉಳಿಸಿಕೊಳ್ಳಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

 

RELATED ARTICLES

Related Articles

TRENDING ARTICLES