Sunday, May 5, 2024

ಭಾರತೀಯ ಸಮಾಜಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ಕೊಡುಗೆ ಅಪಾರ: ಡಾ.ಚಿಕ್ಕಣ್ಣ

ದೊಡ್ಡಬಳ್ಳಾಪುರ: ಡಾ. ಬಿ.ಆರ್ ಅಂಬೇಡ್ಕರ್ ಸಾಮಾಜಿಕ ಸಮಾನತೆ, ಅಸ್ಪೃಶ್ಯತೆಯ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲಿ ಒಬ್ಬರು, ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ ಎಂದು  ಶ್ರೀ ದೇವರಾಜ ಅರಸ್ ಪದವಿ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ ಚಿಕ್ಕಣ್ಣ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ದೇವರಾಜ ಅರಸ್ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಡಾ. ಬಿ.ಆರ್ ಅಂಬೇಡ್ಕರ್ ಓದು” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್ ಅಂಬೇಡ್ಕರ್ ಅವರು ಸಮಾಜ ಸುಧಾರಕ, ಶಿಕ್ಷಣ ತಜ್ಞ, ಕ್ರಿಯಾಶೀಲ ಚಿಂತನೆಗಳುಳ್ಳ ತಾತ್ವಿಕ ಪ್ರಬಂಧಕರಾಗಿದ್ದರು, ಜಾತೀಯತೆಯ ವಿರುದ್ಧ ಹೋರಾಟ ಮಾಡಿದ ಇವರು ರಾಜಕೀಯ ಮುತ್ಸದ್ದಿಗಳು ಆಗಿದ್ದರು, ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಪಟ್ಟಿದ್ದಾರೆ,

ಡಾ. ಬಿ.ಆರ್ ಅಂಬೇಡ್ಕರ್ ಜ್ಞಾನದ ಸಂಕೇತ, ಮಾಹಿತಿ ಸಂಕೇತ, ಭಾರತೀಯ ಆರ್ಥಿಕತೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಶ್ರಮವಹಿಸಿದ್ದರು, ಕೈಗಾರಿಕೀಕರಣ, ಭಾರತದ ತೆರಿಗೆ ನೀತಿ, ಭಾರತೀಯ ಕೃಷಿ ಪದ್ಧತಿ, ಲಿಂಗ ಸಮಾನತೆ, ಮಾತೃತ್ವ ಮಸೂದೆ, ಭ್ರಾತೃತ್ವದ ಕುರಿತ ವಿಚಾರಗಳ ಬಗ್ಗೆ ಚಿಂತಿಸಿದ ಮಹಾನ್ ಚೇತನ ಎಂದರು.

ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ವಿರುದ್ದ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಗೆ ಜಾಮೀನು ಮಂಜೂರು!

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಮಿರ್ಚಿ ಪ್ರಾಸ್ತಾವಿಕವಾಗಿ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್, ಕುವೆಂಪು ಇಂತಹ ಮಹನೀಯರ ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನ ವೃದ್ಧಿಯಾಗುತ್ತದೆ ಎಂದರು.

ಬಹುಮಾನ ವಿತರಣೆ:
ಆಶುಭಾಷಣ, ಕವನ ವಾಚನ, ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ದೀಕ್ಷಿತ,ಹೇಮ,ನಿಖಿತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾಲೇಜಿನ  ಪ್ರಾಂಶುಪಾಲರಾದ ಟಿ. ಮಹಾಂತೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ವಿದ್ಯಾರ್ಥಿಗಳು ಪುಸ್ತಕ ಓದುವುದನ್ನು ರೂಡಿಸಿಕೊಳ್ಳಬೇಕು, ಮೊಬೈಲ್ ಬಳಸುವುದನ್ನು ಕಡಿಮೆ ಮಾಡಬೇಕು, ಮೊಬೈಲ್ ಒಂದು ಗ್ರಂಥ ಭಂಡಾರ ಇದ್ದ ಹಾಗೆ ಮೊಬೈಲ್ ನಿಂದ ಸಿಗುವ ಒಳ್ಳೆಯ ವಿಚಾರಗಳನ್ನು ಮಾತ್ರ ಗ್ರಹಿಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪರಿವರ್ತನಾ ಟ್ರಸ್ಟ್ ನ ಕಾರ್ಯದರ್ಶಿ ಮೂರ್ತಿ, ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಟಿ.ಜಿ ಮಂಜುನಾಥ, ಕನ್ನಡ ವಿಭಾಗದ ಹಿರಿಯ ಉಪನ್ಯಾಸಕರಾದ ಆನಂದ ಮತ್ತಿತರರು ಹಾಜರಿದ್ದರು.

RELATED ARTICLES

Related Articles

TRENDING ARTICLES