ಬೆಂಗಳೂರು ಗ್ರಾಮಾಂತರ : ಸಾಕು ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಕಿಡಿಗೇಡಿಗಳು ಚಾಕುವಿನಿಂದ ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ದೊಡ್ಡಚೀಮನಹಳ್ಳಿಯಲ್ಲಿ ನಡೆದಿದೆ.
ಮಧು ಕುಮಾರ್ (34) ಚಾಕು ಇರಿತಕ್ಕೊಳಗಾದ ನಾಯಿ ಮಾಲೀಕ ಎಂದು ತಿಳಿದುಬಂದಿದೆ. ಚಾಕು ಇರಿತದ ರಭಸಕ್ಕೆ ಚಾಕುವಿನ ತುದಿ ಮುರಿದು ದೇಹದೊಳಗೆ ಉಳಿದುಕೊಂಡಿದೆ. ಕೂಡಲೇ ಆತನನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ದೊಡ್ಡಚೀಮನಹಳ್ಳಿ ಗ್ರಾಮದ ಸುನೀಲ್, ಅನೀಲ್, ದೇವರಾಜ್ ಹಾಗೂ ಅಜಯ್ ಎಂಬವರು ಮಧು ಕುಮಾರ್ ಬಳಿ ಗಲಾಟೆ ನಡೆಸಿದ್ದಾರೆ. ಈ ಗಲಾಟೆ ತಾರಕಕ್ಕೇರಿ ನಾಲ್ವರು ಸೇರಿ ಚಾಕುವಿನಿಂದ ಇರಿದಿದ್ದಾರೆ. ಅಲ್ಲದೇ ಆತನ ಪತ್ನಿ ಮಮತಾ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.
ನಾಲ್ವರ ಮೇಲೆ ಎಫ್ಐಆರ್
ಪ್ರಕರಣ ಸಂಬಂಧ ಮಧು ಕುಮಾರ್ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಯಿ ಮಾಲೀಕನ ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 504, 506(ಸಾರ್ವಜನಿಕ ಸ್ಥಳದಲ್ಲಿ ನಿಂದನೆ), 354, 324(ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ) ಸೆಕ್ಷನ್ಗಳ ಅಡಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.


