ಶಿವಮೊಗ್ಗ : ತಾಕತ್ತು ಇದ್ರೆ ಸಾವರ್ಕರ್ ಪೋಟೋ ಮುಟ್ಟಲಿ ನೋಡೊಣ. ಅಂದೇ ರಾಜ್ಯದಲ್ಲಿ ಈ ಸರ್ಕಾರ ಇರುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಗುಡುಗಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಫೋಟೋ ಹಾಕಿದಾಗ ಬಾಯಿಯಲ್ಲಿ ಮಣ್ಣು ಹಾಕಿಕೊಂಡಿದ್ರಾ? ಸ್ವತಂತ್ರ ಹೋರಾಟಗಾರರಿಗೂ ಪ್ರಿಯಾಂಕ್ ಖರ್ಗೆಗೂ ಏನು ಸಂಬಂಧ? ಹುಚ್ಚುಚ್ಚಾಗಿ ಮಾತನಾಡುವನ ಬಗ್ಗೆ ನಾನು ಮಾತನಾಡಲ್ಲ. ಬೇಕಾದರೆ ಅವರ ಅಪ್ಪನ ಬಗ್ಗೆ ಮಾತನಾಡುತ್ತೇನೆ ಎಂದು ಕಿಡಿಕಾರಿದರು.
ವೀರ ಸಾವರ್ಕರ್ ರಕ್ತ ಹಂಚಿಕೊಂಡ ನಾವು ಗೆಲ್ಲುತ್ತೇವೆಯೋ ಅಥವಾ ಮೊಹಮ್ಮದ್ ಅಲಿ ರಕ್ತ ಹಂಚಿಕೊಂಡ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಗೆಲ್ಲುತ್ತಾರೆಯೇ ನೋಡೊಣ ಎಂದು ಸವಾಲೆಸೆದರು.
ಇದಕ್ಕೆ ಬಿಜೆಪಿ ಹೆದರುವುದಿಲ್ಲ
ಗೂಂಡಾ ಮತ್ತು ಕೊಲೆಗುಡುಕರ ರಾಜ್ಯವಾಗಲು ಕಾಂಗ್ರೆಸ್ ಕಾರಣ. ಆದರೆ, ಇದಕ್ಕೆ ಬಿಜೆಪಿ ಹೆದರುವುದಿಲ್ಲ. ಗ್ಯಾರಂಟಿಗಳ ಹೆಸರಿನಲ್ಲಿ ಆಡಳಿತನಡೆಸುವ ಕಾಲ ಮುಗಿಯಲಿದೆ. ಪೇ ಸಿಎಂ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ಸಿಗರಿಗೆ ಪೇ ಡಿಸಿಎಂ ಎಂದು ಹೇಳಿದರೆ ತಡೆದುಕೊಳ್ಳಲು ಆಗುತ್ತಿಲ್ಲ. ಹಾಗಾಗಿ, ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಗೂಂಡಾಗಳನ್ನು ಬಗ್ಗು ಬಡಿಯಲು ಕಾಂಗ್ರೆಸ್ಗೆ ಸಾಧ್ಯವಾಗುತ್ತಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಕೆಲ ಕಾಂಗ್ರೆಸ್ಸಿಗರು ವಿರೋಧಿಸುತ್ತಿದ್ದಾರೆ
ಆರ್ಟಿಕಲ್ 370 (ವಿಶೇಷ ಸ್ಥಾನಮಾನ) ರದ್ದಾಗಿರುವುದು ಸಂತಸದ ವಿಷಯ. ಆದರೆ, ಕೆಲ ಕಾಂಗ್ರೆಸ್ಸಿಗರು ಇದನ್ನು ವಿರೋಧಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಜಮ್ಮು-ಕಾಶ್ಮೀ ರದ ಜನತೆ ಸ್ವಾಗತಿಸಿ ಸಂಭ್ರಮಾಚರಣೆ ನಡೆಸಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.