Thursday, October 24, 2024

ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 7 ಲಕ್ಷ ರೂ. ಪರಿಹಾರ : ಎಂ.ಬಿ. ಪಾಟೀಲ್

ವಿಜಯಪುರ : ಸರಣಿ ಪಿಲ್ಲರ್​​ಗಳು ಕುಸಿದು ಬಿದ್ದು ಸಾವಿಗೀಡಾದ ಬಿಹಾರದ ಏಳು ಕಾರ್ಮಿಕರ ಕುಟುಂಬಕ್ಕೆ ತಲಾ 7 ಲಕ್ಷ ಪರಿಹಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್​​ ಘೋಷಣೆ ಮಾಡಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ರಾಜಗುರು ಫುಡ್ಸ್​​ನ ಮಾಲೀಕ ಕಿಶೋರ್ ಜೈನ್ ಅವರು ಸಾವಿಗೀಡಾದ ಕಾರ್ಮಿಕರಿಗೆ ತಲಾ 5 ಲಕ್ಷ ರೂ. ಪರಿಹಾರ ಕೊಡಲು ಒಪ್ಪಿದ್ದಾರೆ. ರಾಜ್ಯ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ನೀಡಲಿದೆ ಎಂದು ತಿಳಿಸಿದರು.

ವಿಜಯಪುರ ನಗರದ ಹೊರವಲಯದ ಅಲಿಯಾಬಾದ ಕೈಗಾರಿಕೆ ಪ್ರದೇಶದಲ್ಲಿ ರಾಜಗುರು ಮೆಕ್ಕೆಜೋಳ‌ ಸಂಸ್ಕರಣೆ ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೆ ನನ್ನ ಸಂತಾಪಗಳನ್ನು ಸೂಚಿಸುತ್ತೇನೆ. ಶೀಘ್ರ ರಕ್ಷಣಾ ಕಾರ್ಯ ಕೈಗೊಂಡರೂ ಸಹ ಬೃಹತ್ ರಾಶಿಯಡಿ ಸಿಲುಕಿದ್ದ ಪರಿಣಾಮ ಅವರನ್ನು ಬದುಕಿಸಲಾಗಲಿಲ್ಲ. ಗಾಯಗೊಂಡಿರುವ ಒಬ್ಬ ಕಾರ್ಮಿಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯವಾಗಿದ್ದಾರೆ. ಅವರಿಗೆ ಸಹ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಮೃತರೆಲ್ಲರೂ ಬಿಹಾರ ರಾಜ್ಯದವರಾಗಿದ್ದು, ಅವರ ಕುಟುಂಬದವರೊಡನೆ ಈಗಾಗಲೇ ಸಂಪರ್ಕದಲ್ಲಿದ್ದು ಮೃತದೇಹಗಳನ್ನು ವಿಮಾನದ ಮೂಲಕ ಪಾಟ್ನಾಗೆ ಸಾಗಿಸಿ ಅಲ್ಲಿಂದ ಅವರ ಮನೆಗಳಿಗೆ ತಲುಪಿಸಲಾಗುವುದು. ರಕ್ಷಣಾ ಕಾರ್ಯದ ಸಂದರ್ಭದಲ್ಲಿ ನಾನು ಸ್ವತಃ ಅಲ್ಲಿದ್ದು, ಪರಿಸ್ಥಿತಿಯು ಕ್ಲಿಷ್ಟವಾಗಿತ್ತು. ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಶ್ರಮಿಸಿದ ನಮ್ಮ ಎಲ್ಲಾ ಎಸ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್., ಅಗ್ನಿಶಾಮಕ, ಪೊಲೀಸ್ ಹಾಗೂ ಜಿಲ್ಲಾಡಳಿತ ತಂಡದವರಿಗೆ ನನ್ನ ಧನ್ಯವಾದಗಳು ಎಂದು ಎಂ.ಬಿ. ಪಾಟೀಲ್ ತಿಳಿಸಿದರು.

RELATED ARTICLES

Related Articles

TRENDING ARTICLES