Sunday, May 12, 2024

ದೇಶದಲ್ಲಿ ಬ್ರಾಂಡ್ ಬೆಂಗಳೂರು ನಂಬರ್ ಒನ್ ಆಗಿಸಬೇಕಿದೆ: ಸಿಎಂ ಸಿದ್ದರಾಮಯ್ಯ ಕರೆ

ಬೆಂಗಳೂರು: ದೇಶದಲ್ಲಿ ಬ್ರಾಂಡ್ ಬೆಂಗಳೂರನ್ನು ನಂಬರ್ ಒನ್ ಆಗಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ “ಮುನಿಸಿಪಾಲಿಕಾ-2023” 17 ನೇ ಅಂತಾರಾಷ್ಟ್ರೀಯ ಸಮ್ಮೇಳನ‌ ಹಾಗೂ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಭಾರತವೂ ಸುಸ್ಥಿರ ಬೆಳವಣಿಗೆ ಕಾಣಬೇಕು. ರಾಜ್ಯದ 316 ನಗರಗಳಿಗೆ ಅಗತ್ಯ ಎಲ್ಲಾ ನಾಗರಿಕ ಸವಲತ್ತುಗಳನ್ನು ನಮ್ಮ ಸರ್ಕಾರ ಒದಗಿಸುತ್ತಿದೆ ಎಂದರು.

ರಾಜ್ಯದಲ್ಲಿ ಶೇ38 ರಷ್ಟು ಮಂದಿ ನಗರ ಪ್ರದೇಶಗಳಲ್ಲಿ‌ ನೆಲೆಸಿದ್ದಾರೆ. ಇವರೆಲ್ಲರಿಗೂ ಟ್ರಾಫಿಕ್ ಕಿರಿಕಿರಿ ಇಲ್ಲದ, ಸುಗಮ ಸಂಚಾರ, ಅಗತ್ಯ ಕಸ ವಿಲೇವಾರಿ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಸೇರಿ ನಾಗರಿಕ‌ ಸವಲತ್ತುಗಳನ್ನು ಒದಗಿಸುವುದು ಸವಾಲಿನ ಕೆಲಸ. ಇದನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದರು.

ಇದನ್ನೂ ಓದಿ: ರಾಕ್​ಲೈನ್​ ವೆಂಕಟೇಶ್​ ತಮ್ಮನ ಮನೆಯಲ್ಲಿ ಕಳ್ಳತನ: ಖತರ್ನಾಕ್ ನೇಪಾಳಿ ರಾಬರಿ ಗ್ಯಾಂಗ್ ಅಂದರ್

ನಾವು ನಗರ ಪ್ರದೇಶದ ಕುಡಿಯುವ ನೀರಿಗೆ 9ಸಾವಿರ ಕೋಟಿ ಕೊಡಲು ನಿರ್ಧರಿಸಿರುವುದು ಸೇರಿದಂತೆ ನಗರ ಜೀವನ‌ಮಟ್ಟ ಇನ್ನಷ್ಟು ಸುಗಮಗೊಳಿಸಲು ಅಗತ್ಯ ಇರುವ ಎಲ್ಲಾ ವಲಯಗಳಿಗೂ ಸರ್ಕಾರ ಅಗತ್ಯ ಅನುದಾನವನ್ನು ಒದಗಿಸುತ್ತಿದೆ ಎಂದರು.‌

ಈ ಬಾರಿ ನಾವು ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯುತ್ತಿದ್ದೇವೆ. ಬೆಲೆ ಏರಿಕೆ ಹೆಚ್ಚಾಗಿದ್ದರೂ ಹಿಂದಿನ ದರದಲ್ಲೇ ಬಡವರು, ಮಧ್ಯಮ ವರ್ಗದವರಿಗೆ ಊಟ-ಉಪಹಾರದ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದು ವಿವರಿಸಿದರು.

ಈ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕ ತಮ್ಮಯ್ಯ, ಎಂ.ಎಲ್ಸಿ ಎಸ್.ರವಿ, ಆಸ್ಟ್ರೇಲಿಯಾ ವ್ಯಾಪಾರ ಮತ್ತು ಹೂಡಿಕೆ ಆಯೋಗದ ಅಧ್ಯಕ್ಷೆ ಕ್ಯಾಥರಿನ್ ಗಲೇಘರ್ ನಾಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ಕಮಿಷನರ್ ಜಯರಾಮ್ ಮತ್ತಿತರರು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES