Friday, May 17, 2024

ಶಾಸಕರು, ಸಚಿವರೇ ಗುದ್ದಾಡಿ ಅನುದಾನ ತರಬೇಕಿದೆ : ಸಚಿವ ಶಿವಾನಂದ ಪಾಟೀಲ್ ಬೇಸರ

ವಿಜಯಪುರ : ಯಾವುದೇ ಸರ್ಕಾರ ಇರಲಿ, ಬಸವಣ್ಣನ ಜನ್ಮಭೂಮಿ ಬಗ್ಗೆ ಅವರಿಗೆ ಕಾಳಜಿ ಇಲ್ಲ. ನಾವೇ ಶಾಸಕರು, ಸಚಿವರೇ ಗುದ್ದಾಡಿ ಅನುದಾನ ತರಬೇಕಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಎಂದು ನಾಮಕರಣ ಮಾಡುವ ವಿಚಾರ ಕುರಿತು ಮಾತನಾಡಿರುವ ಅವರು, ಬಸವೇಶ್ವರರ ಹೆಸರು ಈಗಾಗಲೇ ಪ್ರಚಲಿತದಲ್ಲಿದೆ. ಬಸವಣ್ಣನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯಲ್ಲಿ ಎಂಬುದು ಇಡಿ ಜಗತ್ತಿಗೆ ಗೊತ್ತಿದೆ ಎಂದು ಹೇಳಿದ್ದಾರೆ.

ಬಸವಣ್ಣ ಜಗತ್ತಿಗೆ ಪ್ರಖ್ಯಾತಿ ಪಡೆದಂತಹವರಾಗಿದ್ದಾರೆ. ಬರೀ ಹೆಸರು ಬದಲಾವಣೆ ಮಾಡುವುದರಿಂದ ಅವರ ಹಿರಿಮೆ, ಅವರ ಗರಿಮೆ ಜಗತ್ತಿಗೆ ಪರಿಚಯಿಸೋದು ಕಷ್ಟ. ಬಸವಣ್ಣನ ಕುರುಹು ಸಮಾಜಕ್ಕೆ ತಿಳಿಯಬೇಕಿದೆ. ಕೂಡಲಸಂಗಮ, ಬಸವ ಜನ್ಮಭೂಮಿಯೂ ಕೂಡ ಅಭಿವೃದ್ಧಿ ಆಗಿಲ್ಲ. ಅದರ ಕಡೆ ಹೆಚ್ಚು ಒತ್ತು ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ.

ಬಸವಣ್ಣನ ಜನ್ಮಭೂಮಿ ಅಭಿವೃದ್ಧಿ ಮಾಡಬೇಕು

ನಾನು ಬಸವಣ್ಣನ ಅಭಿಮಾನಿ ಎಂದು ನಾನು ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ರೆ ಅದು ಸಾಧನೆ ಅಲ್ಲ. ಯಾರೇ ಸಿಎಂ ಇರಲಿ ಅಧಿಕಾರ, ಅವಕಾಶ ಇದ್ದಾಗ ಬಸವಣ್ಣನ ಜನ್ಮಭೂಮಿ ಹಾಗೂ ಕರ್ಮ ಭೂಮಿ ಅಭಿವೃದ್ಧಿ ಮಾಡಬೇಕು. ಜಗತ್ತಿಗೆ ತೋರಿಸುವ ಕೆಲಸ ಬಸವಣ್ಣನವರ ಜನ್ಮ ಸ್ಥಳದಲ್ಲಿ ಆಗಬೇಕಿದೆ. ಮರುನಾಮಕರಣ ಈ ಸಂದರ್ಭದಲ್ಲಿ ಮಾಡೋದು, ಬಸವೇಶ್ವರ ಹೆಸರು ಜಿಲ್ಲೆಗೆ ಇಟ್ಟಮೇಲೆ ಹೆಸರು ಹೇಳೋದು ಕಷ್ಟವಾಗುತ್ತೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES