Friday, May 17, 2024

ಒಂದು ಸೀಟ್​ನವರು, 303 ಸೀಟ್​ನವರ ಜೊತೆ ಬಂದಿದ್ದಾರೆ : ಮಾಜಿ ಶಾಸಕ ಪ್ರೀತಂಗೌಡ

ಹಾಸನ : ನಾವು ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಜೆಡಿಎಸ್​ನವರು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರೋದು. ಯಾಕೆಂದರೆ ನಮ್ಮದು ನ್ಯಾಷನಲ್ ಪಾರ್ಟಿ, 303 ಸೀಟ್ ತಗೊಂಡಿದ್ದಂತವರು. ಒಂದು ಸೀಟುನವರು ಬಂದು, 303 ಸೀಟುನವರ ಜೊತೆ ಬಂದಿದ್ದಾರೆ ಎಂದು ಮೈತ್ರಿ ಬಗ್ಗೆ ಮಾಜಿ ಶಾಸಕ ಪ್ರೀತಂಗೌಡ ಕುಹಕವಾಡಿದರು.

ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಅವರು, ಬಂದಿರುವಂತಹ ನೆಂಟರು ಯಾರು ಮನೆಯರು ಇರ್ತಾರೆ, ಅವರ ಜೊತೆ ತತ್ವ, ಸಿದ್ದಾಂತ, ರಾಷ್ಟ್ರೀಯತೆ ಎಲ್ಲವನ್ನೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಒಂದು ಮನೆಗೆ ಸಂಬಂಧ ಬೆಳೆಸಿದಾಗ ಮನೆ ಬಗ್ಗೆ ಎಲ್ಲಾ ಕೇಳ್ಕೊಂಡಿರ್ತಾರೆ. ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿರ್ತಾರೆ ಅವಾಗ ಏನಂತಾರೆ? ಅತ್ತೆ ಮಾವ ಎಲ್ಲಾ ಚೆನ್ನಾಗಿದ್ದಾರೆ, ಮಕ್ಕಳೆಲ್ಲಾ ಚೆನ್ನಾಗಿದ್ದಾರೆ, ಒಳ್ಳೆಯ ಸಂಸ್ಕಾರವಂತರು, ಒಳ್ಳೆಯ ಸಂಸ್ಕಾರವನ್ನ ಕಲಿತಿದ್ದಾರೆ ಅಂತೇಳಿ ಮನೆಯ ಸಂಬಂಧವನ್ನ ಮಾಡ್ತಾರೆ. ಬಿಜೆಪಿಯ ಸಂಸ್ಕಾರ ಏನು ಅಂದ್ರೆ, ನಮ್ಮದು ರಾಷ್ಟ್ರೀಯತೆ, ದೇಶ ಮೊದಲು ವ್ಯಕ್ತಿ ಕೊನೆ ಅನ್ನೋ ಅಜೆಂಡಾ. ಈ ಎಲ್ಲವನ್ನೂ ಒಪ್ಕೊಂಡು ಬಂದಿರೋದ್ರಿಂದ ಬೇಡ ಅಂತೇಳೋದಕ್ಕೆ ನಾನು ಯಾರು? ಎಂದು ತಿಳಿಸಿದರು.

ನಾನು ಕೂಡಾ ಒಪ್ಪಿಕೊಳ್ಳಲೇಬೇಕು

ನಮ್ಮ ರಾಷ್ಟ್ರೀಯ ನಾಯಕರು ಟ್ವೀಟ್ ಮಾಡೋದ್ರ ಮೂಲಕ ಜೆಡಿಎಸ್ ಮೈತ್ರಿಯಾಗಿ ಎನ್​ಡಿಎ ಒಳಗೆ ಬಂದಿದೆ ಅಂತ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ‌ ಹಿರಿಯರು ಏನು ತೀರ್ಮಾನ ಮಾಡ್ತಾರೆ, ಆ ತೀರ್ಮಾನಕ್ಕೆ ಒಬ್ಬ ಕಾರ್ಯಕರ್ತನಾಗಿ ನಾನು ಕೂಡಾ ಒಪ್ಪಿಕೊಳ್ಳಲೇಬೇಕು. ಸ್ವಾಗತ ಮಾಡೋದು ಇನ್ನೊಂದು, ಆ ಸಂದರ್ಭದಲ್ಲಿ ಮಾತನಾಡ್ತೇವೆ. ಈಗ ಅವರು ಬಂದಿದ್ದಾರೆ, ಅದಕ್ಕೆ ನಮ್ಮ ರಾಷ್ಟ್ರೀಯ ನಾಯಕರು ಮಾಡಿರೋ ತೀರ್ಮಾನಕ್ಕೆ ನಾವು ಬದ್ದವಾಗಿರೋ ಕೆಲಸ ಮಾಡುತ್ತೇವೆ ಎಂದರು.

ಬಿಜೆಪಿ ಪಾಲಾಗುತ್ತೋ, ಜೆಡಿಎಸ್ ಪಾಲಾಗುತ್ತೋ?

ನಮ್ಮಲ್ಲಿ ವಂಶಪಾರಂಪರ್ಯಕ್ಕೆ ಅವಕಾಶ ಇರೋದಿಲ್ಲ. ನಮ್ಮಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇರೋದಿಲ್ಲ. ಈ ಎಲ್ಲಾ ಅಂಶಗಳನ್ನು ಅವರು ಮನದಟ್ಟು ಮಾಡ್ಕೊಂಡು, ಆದ್ರೂ ದೇಶದ ಹಿತದೃಷ್ಟಿಯಿಂದ. ನರೇಂದ್ರ‌ ಮೋದಿಯವರು‌ ಮೂರನೇ ಬಾರಿ ಪ್ರಧಾನಿ ಆಗಬೇಕಾಗಿರೋದ್ರಿಂದ ಸ್ವಾಗತ. ಹಾಸನ ಬಿಜೆಪಿ ಪಾಲಾಗುತ್ತೋ, ಆರ್​ಪಿಐ ಪಾಲಾಗುತ್ತೋ, ಜೆಡಿಎಸ್ ಪಾಲಾಗುತ್ತೋ, ಎನ್​ಡಿಎ ಮೈತ್ರಿಕೂಟ ಪಕ್ಷಗಳು ಬಹಳಷ್ಟಿದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES