Friday, May 17, 2024

ಗಣೇಶೋತ್ಸವಕ್ಕೆ ಜೂನಿಯರ್ ಧ್ರುವ ಸರ್ಜಾ ಎಂಟ್ರಿ : ಫಲಿಸಿದ ಪೂಜಾಫಲ!

ಕೊನೆಗೂ ಫಲಿಸಿತು ಧ್ರುವ ಸರ್ಜಾ ಪೂಜಾಫಲ ಹಾಗೂ ಹರಕೆ. ಅಣ್ಣನೇ ಮತ್ತೆ ಹುಟ್ಟಿ ಬರಲೆಂದು ಚಿರು ಸಮಾಧಿ ಬಳಿಯೇ ಮಲಗಿ, ದೇವರಲ್ಲಿ ಪ್ರತಿದಿನ ಪ್ರಾರ್ಥಿಸುತ್ತಿದ್ದ ಹ್ಯಾಟ್ರಿಕ್ ಆ್ಯಕ್ಷನ್​ ಪ್ರಿನ್ಸ್​ಗೆ ಲಾರ್ಡ್​ ಗಣಪ ಬಿಗ್ಗೆಸ್ಟ್ ಗುಡ್ ನ್ಯೂಸ್ ನೀಡಿದ್ದಾರೆ. ನಿರೀಕ್ಷೆ ಹುಸಿಯಾಗಲಿಲ್ಲ. ಗಣೇಶೋತ್ಸವದಂದೇ ಜೂನಿಯರ್ ಧ್ರುವ ಎಂಟ್ರಿ ಕೊಡೋ ಮೂಲಕ ಸಂಭ್ರಮವನ್ನ ಡಬಲ್ ಮಾಡಿದ್ದಾರೆ. ಈ ಕುರಿತ ಜಾಯ್​ಫುಲ್ ಸ್ಟೋರಿ ನಿಮಗಾಗಿ ಕಾಯ್ತಿದೆ, ಒಮ್ಮೆ ನೋಡ್ಕೊಂಡ್ ಬನ್ನಿ.

ಸ್ಯಾಂಡಲ್​ವುಡ್​​ನ ಹ್ಯಾಟ್ರಿಕ್ ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ, ಇದೀಗ ಪ್ಯಾನ್ ಇಂಡಿಯಾ ಹೀರೋ ಆಗಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರುತ್ತಿದ್ದಾರೆ. ಯೆಸ್.. ಸಿಂಗಲ್ ಟೀಸರ್​ನಿಂದ ಮಾರ್ಟಿನ್ ಟೀಸರ್ ಗ್ಲೋಬಲ್ ಮಾರ್ಕೆಟ್​​ನಲ್ಲಿ ಧೂಳೆಬ್ಬಿಸಿದೆ. ಒಂದ್ಕಡೆ ಮಾರ್ಟಿನ್ ರಿಲೀಸ್, ಮತ್ತೊಂದ್ಕಡೆ ಕೆಡಿ ಶೂಟಿಂಗ್​ನಲ್ಲಿ ಬ್ಯುಸಿ ಇರೋ ಬಹದ್ದೂರ್ ಗಂಡು ಧ್ರುವ, ಇದೀಗ ಗಣೇಶೋತ್ಸವ ವಿಶೇಷ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ.

ಯೆಸ್.. ಹಬ್ಬದಲ್ಲಿ ಹಬ್ಬ ಅನ್ನುವಂತೆ, ಅಣ್ಣ ಚಿರುನೇ ಹುಟ್ಟಿಬರಲೆಂದು ಆಶಿಸುತ್ತಿದ್ದ ಧ್ರುವ ದಂಪತಿಗೆ ಅವ್ರ ಹರಕೆ, ಪೂಜಾಫಲಗಳು ಫಲಿಸಿವೆ. ಇಂದು ಮುಂಜಾನೆ ಕೆಆರ್ ರಸ್ತೆಯಲ್ಲಿರೋ ಅಕ್ಷ ಆಸ್ಪತ್ರೆಯಲ್ಲಿ ಧ್ರುವ ಪತ್ನಿ ಪ್ರೇರಣಾ ಶಂಕರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಾರ್ಮಲ್ ಡೆಲಿವರಿ ಆಗಿದ್ದು, ತಾಯಿ ಮತ್ತು ಮಗು ಕ್ಷೇಮವಾಗಿದ್ದಾರೆ ಅಂತ ಧ್ರುವ ಖುಷಿ ಹಂಚಿಕೊಂಡಿದ್ದಾರೆ.

ಈಗಾಗ್ಲೇ ಹೆಣ್ಣು ಮಗುವಿನ ತಂದೆ ಅನಿಸಿಕೊಂಡಿದ್ದ ಧ್ರುವ, ನಮಗೀಗ ರಾಯನ್ ರಾಜ್ ಸರ್ಜಾ ಆಲ್​ರೆಡಿ ಮಗನಂತೆ ಇದ್ದಾನೆ. ಯಾವ ಮಗು ಆದ್ರೂ ಓಕೆ ಅಂದಿದ್ರು. ಆದ್ರೆ ಇತ್ತೀಚೆಗೆ ಚಿರು ಸರ್ಜಾ ಸಮಾಧಿ ಬಳಿಯೇ ಮಲಗೋ ಮೂಲಕ ಮತ್ತೆ ಅಣ್ಣನೇ ಹುಟ್ಟಿಬರಲೆಂದು ಪ್ರಾರ್ಥಿಸಿದ್ದು ಸುಳ್ಳಲ್ಲ. ಅದ್ರಂತೆ ಲಾರ್ಡ್​ ಗಣಪ, ಅವ್ರ ಹರಕೆ & ಆಶಯಗಳನ್ನ ತೀರಿಸಿದ್ದಾರೆ. ಗಣೇಶೋತ್ಸವದಂದೇ ಸರ್ಜಾ ಕುಟುಂಬಕ್ಕೆ ಹೊಸದೊಂದು ಕುಡಿಯನ್ನ ನೀಡಿದ್ದಾರೆ.

ಕಗ್ಗಲಿಪುರದ ಬಳಿ ಇರೋ ಫಾರ್ಮ್​ ಹೌಸ್​​ನಲ್ಲಿ ಅಣ್ಣನ ಸಮಾಧಿ ಬಳಿಯೇ ರೀಸೆಂಟ್ ಆಗಿ ಪತ್ನಿ ಪ್ರೇರಣಾರಿಗೆ ಸೀಮಂತ ಕಾರ್ಯಕ್ರಮ ಮಾಡಿದ್ರು ಧ್ರುವ ಸರ್ಜಾ. ಕುಟುಂಬಸ್ಥರು ಹಾಗೂ ಅತ್ಯಾಪ್ತರಷ್ಟೇ ಭಾಗಿಯಾಗಿದ್ದ ಸೀಮಂತ ಫಂಕ್ಷನ್​​ನಲ್ಲಿ ಮಗಳೊಂದಿಗೆ ದಂಪತಿ ಖುಷಿಯ ಕ್ಷಣಗಳನ್ನ ಕಳೆದಿದ್ದರು. ಆದ್ರೀಗ ಆ ಪುಟ್ಟ ಹೆಣ್ಣು ಮಗುವಿಗೆ ತಮ್ಮನನ್ನ ನೀಡೋ ಮೂಲಕ ತಮ್ಮ ಜೀವನದ ಮತ್ತೊಂದು ಮಹತ್ವದ ಘಟ್ಟ ತಲುಪಿದ್ದಾರೆ ಧ್ರುವ ಸರ್ಜಾ- ಪ್ರೇರಣಾ ಶಂಕರ್ ದಂಪತಿ.

ಇಂದು ಗೌರಿ ಹಾಗೂ ಗಣೇಶ ಹಬ್ಬ ಎರಡೂ ಒಟ್ಟೊಟ್ಟಿಗೆ ಬಂದಿವೆ. ಇದೊಂದೇ ಅಲ್ಲ, ನಮ್ಮ ಸ್ಯಾಂಡಲ್​ವುಡ್​ನ ಇಬ್ಬರು ದಿಗ್ಗಜ ಕಲಾವಿದರು ಜನಿಸಿದ ದಿನವೂ ಹೌದು. ಒಂದ್ಕಡೆ ಅಭಿನವ ಭಾರ್ಗವ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಜನ್ಮ ದಿನವಾದ್ರೆ, ಇದೇ ದಿನ ರಿಯಲ್ ಸ್ಟಾರ್ ಉಪೇಂದ್ರ ಅವ್ರಿಗೂ ಬರ್ತ್ ಡೇ ಸಂಭ್ರಮ. ಹಾಗಾಗಿ ಇಂತಹ ಶುಭದಿನ ಜನಿಸಿದ ಜೂನಿಯರ್ ಧ್ರುವ ಸರ್ಜಾ, ನಿಜಕ್ಕೂ ಟ್ರೆಂಡ್ ಸೆಟ್ಟರ್ ಆಗಲಿದ್ದಾರೆ ಅನ್ನೋ ನಂಬಿಕೆ ಹುಟ್ಟಿಸಿದ್ದಾರೆ. ಇದು ಕಾಕತಾಳೀಯ. ಆದ್ರೆ ಇವತ್ತೇ ಜನಿಸಿದ್ದು ಖುಷಿ ಅಂತಾರೆ ಧ್ರುವ.

ವಾರಸ್ಧಾರ ಬಂದಿರೋ ಖುಷಿಯಲ್ಲಿರೋ ಧ್ರುವ, ಆಸ್ಪತ್ರೆಯ ಬಳಿಯೇ ಫ್ಯಾನ್ಸ್ ಜೊತೆ ಸಂಭ್ರಮಾಚರಿಸಿದ್ದಾರೆ. ಸಿಹಿ ಹಂಚಿ, ಫ್ಯಾನ್ಸ್ ಜೊತೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಮಗನ ಆಗಮನದಿಂದ ಜೀವನೋತ್ಸಾಹ ಹಾಗೂ ಸಿನಿಮೋತ್ಸಾಹ ಡಬಲ್ ಆಗಿದ್ದು, ಇನ್ಮೇಲೆ ಧ್ರುವ ಸಿನಿಮಾಗಳ ಸಂಖ್ಯೆ ಕೂಡ ಜಾಸ್ತಿ ಆಗಲಿವೆ ಎನ್ನಲಾಗ್ತಿದೆ. ಅದೇನೇ ಇರಲಿ, ತಮ್ಮ ನೆಚ್ಚಿನ ನಾಯಕನಟನ ಮನೆಗೆ ವಾರಸ್ದಾರ ಬಂದಿರೋದು ಇಡೀ ಧ್ರುವ ಸರ್ಜಾ ವಿಐಪಿಗಳಿಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES