ಬೆಂಗಳೂರು : ಕಾಂಗ್ರೆಸ್ ಅಪ್ರಸ್ತುತ ಪಕ್ಷ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ, ಯಾವ ರೀತಿ ಅಂತ ವಿಶ್ಲೇಷಣೆ ಮಾಡಲ್ಲ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ 100 ದಿನಗಳಲ್ಲಿ 100 ಲೋಪಗಳಿದೆ. ಕುಡಿಯುವ ನೀರಿಗೆ ಸಮಸ್ಯೆ ತಂದಿಟ್ಟಿದ್ದಾರೆ. ಭ್ರಷ್ಟಾಚಾರ ತಾಂಡವವಾಡಿ, ಲೂಟಿ ಮಾಡ್ತಿದ್ದಾರೆ ಎಂದು ದೂರಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಾ? ಎಂಬ ಪ್ರಶ್ನೆಗೆ, ಆ ಬಗ್ಗೆ ನಾನು ಇನ್ನೂ ಯೋಚನೆ ಮಾಡಿಲ್ಲ. ಬಿಜೆಪಿಯಿಂದ ದೂರ ಇರುವ ವಿಚಾರಕ್ಕೆ, ಹಲವಾರು ವಿಚಾರಗಳನ್ನು ನಾನು ರಾಷ್ಟ್ರ ನಾಯಕರಿಗೆ ತಿಳಿಸಿದ್ದೇನೆ. ಅದನ್ನೆಲ್ಲ ಸರಿಪಡಿಸುವ ಕೆಲಸ ಮಾಡ್ತಾರೆ ಅನ್ನೊ ನಂಬಿಕೆ ಇದೆ. ಸರಿಪಡಿಸದಿದ್ದರೂ ನನಗೆ ಯಾವುದೇ ನಷ್ಟ ಇಲ್ಲ ಎಂದು ಹೇಳಿದರು.
ಜೆಡಿಎಸ್ ನಾಯಕರ ಇಚ್ಛೆ ಕೂಡ
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್ಡಿಎ ಬಲಪಡಿಸಲು ಪ್ರಾದೇಶಿಕ ಪಕ್ಷಗಳು ಬೆಂಬಲ ಕೊಡುವ ಕೆಲಸ ಆಗ್ತಿದೆ. ರಾಜ್ಯದಲ್ಲಿ ಕೂಡ ಅಂತಹ ಚರ್ಚೆಯಾಗುತ್ತಿದೆ. ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಬೇಕು ಎಂಬ ಚರ್ಚೆ ಆಗ್ತಿದೆ. ಜೆಡಿಎಸ್ ನಾಯಕರು ಕೂಡ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇನ್ನೂ ಅಧಿಕೃತ ಘೋಷಣೆಯಾಗಿಲ್ಲ ಎಂದು ತಿಳಿಸಿದರು.
ಒಟ್ಟಾಗಿ, ಒಗ್ಗಟ್ಟಾಗಿ ಕೆಲಸ
ನಮ್ಮ ನಾಯಕರಾದ ಬಿ.ಎಸ್ ಯಡಿಯೂರಪ್ಪನವರು ಕ್ಷೇತ್ರ ಕೇಳಿದ್ದಾರೆ ಅಂತ ಹೇಳಿದ್ದಾರೆ. ನಾವು ಕಳೆದ ಚುನಾವಣೆಯಲ್ಲಿ ಕೆಲವು ಕ್ಷೇತ್ರ ಕಳೆದುಕೊಂಡಿದ್ವಿ. ಆ ಕ್ಷೇತ್ರದಲ್ಲಿ ಏನು ಮಾಡಬಹುದು? ಒಟ್ಟಾಗಿ, ಒಗ್ಗಟ್ಟಾಗಿ ಕೆಲಸ ಮಾಡಬಹುದು. ಅಧಿಕೃತ ಘೋಷಣೆಯಾದ ಬಳಿಕ ಗೊತ್ತಾಗಲಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು.