Friday, May 17, 2024

ಮನುಷ್ಯ ಮನುಷ್ಯನನ್ನ ದ್ವೇಷಿಸಬಾರದು, ಪ್ರೀತಿಸಬೇಕು : ಸಿದ್ದರಾಮಯ್ಯ

ಬೆಂಗಳೂರು : ಪ್ರೀತಿ, ವಿಶ್ವಾಸ ಇರಬೇಕು. ಮನುಷ್ಯ ಮನುಷ್ಯನನ್ನ ದ್ವೇಷಿಸಬಾರದು, ಪ್ರೀತಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ನನ್ನ ಹುಟ್ಟಿದ ದಿನ ಆಚರಣೆ ಮಾಡಬೇಡಿ, ನನ್ನ ಹುಟ್ಟು ಹಬ್ಬದ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಮಾಡಿ ಅಂದ್ರು. ಸಂವಿಧಾನ ಬಂದಮೇಲೆನೇ ಎಲ್ಲರಿಗೂ ಶಿಕ್ಷಣ ಸಿಕ್ತು. ಅದಕ್ಕೆ ಸಂವಿಧಾನವನ್ನು ಮಕ್ಕಳಿಗೆ ತಿಳಿಸಲು ಪಾಠ ಇದೆ. ಶಿಕ್ಷಕರು ತಮ್ಮ ಶಿಷ್ಯರು ಬಹಳ ಎತ್ತರಕ್ಕೆ ಹೋದರೆ ಖುಷಿ ಪಡ್ತಾರೆ. ಆದರೆ, ಬೇರೆಯವರು ಅಸೂಯೆ ಪಡುತ್ತಾರೆ ಎಂದು ಬೇಸರಿಸಿದರು.

ಶೇ.24 ರಷ್ಟು ಅವಿದ್ಯಾವಂತರು

ಸ್ವಾತಂತ್ರ್ಯ ಬಂದು 76 ವರ್ಷ ಆಯ್ತು. ಆದರೆ, ಇನ್ನು ಎಲ್ಲರಿಗೂ ಶಿಕ್ಷಣ ಸಿಕ್ಕಿಲ್ಲ. ಶೇ.24 ರಷ್ಟು ಅವಿದ್ಯಾವಂತರು ಇರುವ ಸಮಾಜವಿದು. ಶಿಕ್ಷಣ ಸಿಗದೇ ಅಸಮಾನತೆ ನಿರ್ಮಾಣವಾಗಿದೆ. ಎಲ್ಲರಿಗೂ‌ ಶಿಕ್ಷಣ ಸಿಕ್ಕಿದ್ರೆ ಸಮಾನತೆ ಇರ್ತಾ ಇತ್ತು. ಸ್ವಾಭಿಮಾನದಿಂದ ಬದುಕಬೇಕಾದ್ರೆ ಶಿಕ್ಷಣ ಬೇಕೇಬೇಕು. ಅಸಮಾನತೆ ಹೋಗಲಾಡಿಸಲು ಶಿಕ್ಷಣ ಬೇಕೇಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ : ರೇಷನ್ ಕಾರ್ಡ್‌ ತಿದ್ದುಪಡಿಗೆ ಅವಕಾಶ! 

43 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ 

ಇದೇ ವೇಳೆ 43 ಮಂದಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಶಾಸಕರಾದ ರಿಜ್ವಾನ್ ಅರ್ಷದ್, ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES