ಬೆಂಗಳೂರು : ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ತಂಡ ಉಡುಪಿಗೆ ಆಗಮಿಸಿದೆ.
ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ್ದಾರೆ. ಈ ವಿಭಾಗದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕಿ ಅಕ್ಷಯ್ ಮಚ್ಚೇಂದ್ರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ತನಿಖಾಧಿಕಾರಿಯಾಗಿದ್ದ ಬೆಳ್ಳಿಯಪ್ಪ ಸಹಿತ ಮಲ್ಪೆ ಠಾಣೆಯ ಪೊಲೀಸರು ಘಟನೆ ಹಾಗೂ ತನಿಖೆಯ ವರದಿಗಳನ್ನು ಸಿಐಡಿಗೆ ಹಸ್ತಾಂತರಿಸಿದರು. ಇನ್ನುಮುಂದೆ ಅಂಜುಮಾಲಿ ಪ್ರಕರಣದ ತನಿಖಾಧಿಕಾರಿಯಾಗಲಿದ್ದಾರೆ.
ಉಡುಪಿಯ ಖಾಸಗಿ ಅರೆ ವೈದ್ಯಕೀಯ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಮಾಡಲಾಗಿದೆ ಎಂಬ ಆರೋಪ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಸರಕಾರದಿಂದ ಪ್ರಕರಣದ ನಿರಾಕರಣೆ ವಿಪಕ್ಷವನ್ನು ಕೆರಳಿಸಿತ್ತು. ಸರಕಾರದ ಧೋರಣೆಯನ್ನು ಬಂಧಿಸಿ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿದ್ದರು. ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದರು. ಇವೆಲ್ಲದಕ್ಕೂ ಮಣಿದ ಸರಕಾರ ಈಗ ಸಿಐಡಿ ತನಿಖೆಗೆ ವಹಿಸಿದೆ.
ಪ್ರಕರಣವನ್ನು CIDಗೆ ಕೊಟ್ಟಿದೀವಿ
ಉಡುಪಿ ಪ್ರಕರಣ ಸಿಐಡಿಗೆ ವಹಿಸಿರುವ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಕರಣವನ್ನು ಸಿಐಡಿಗೆ ಕೊಟ್ಟಿದೀವಿ. ಇದರ ಬಗ್ಗೆ ಆದೇಶವೂ ಆಗಿದೆ. ನಾವು DYSP ಮಟ್ಟದ ಅಧಿಕಾರಿಗೆ ತನಿಖೆಗೆ ಕೊಟ್ಟಿದ್ವಿ. ಆದ್ರೆ ಇದರಲ್ಲಿ ಉನ್ನತ ಮಟ್ಟದ ತನಿಖೆಗೆ ಕೊಡಿ ಅಂತ ಒತ್ತಾಯ ಬಂದಿದೆ. ಹೀಗಾಗಿ ಸಿಐಡಿಗೆ ಕೊಟ್ಟಿದೀವಿ. ಸಿಐಡಿಗೆ ಕೊಟ್ರೂ ಬೇಡ ಅಂತಾರೆ ಬಿಜೆಪಿಯವ್ರು. ಇವರ ಕಾಲದಲ್ಲಿ ಸಿಐಡಿಗೆ ಕೊಟ್ಟಿರೋದೆಲ್ಲ ಮುಚ್ಚಿ ಹಾಕಿದ್ದಾರೆ ಅಂತ ಅರ್ಥನಾ ಎಂದರು.