ತುಮಕೂರು : ಕೆಎಸ್ಸಾರ್ಟಿಸಿ (ತುಮಕೂರು ನಗರ ಸಾರಿಗೆ) ಬಸ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜಯಮಂಗಲಿ ಬ್ರಿಡ್ಜ್ ಬಳಿ ನಡೆದಿದೆ.
ಆಟೋದಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದು, 9 ಮಂದಿಗೆ ಗಂಭೀರ ಗಾಯಗಳಾಗಿವೆ. ಮಧುಗಿರಿ ತಾಲೂಕಿನ ಜೋಗೇನೇಹಳ್ಳಿಯ ಲಕ್ಷ್ಮೀದೇವಿ ಮೃತ ರ್ದುದೈವಿ. ಇನ್ನು ಗಾಯಾಳುಗಳಿಗೆ ಮಧುಗಿರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಭೇಟಿ ನೀಡಿ ಮೃತ ಲಕ್ಷ್ಮೀದೇವಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಪತಿ ಸಾವು, ಪತ್ನಿ ಗಂಭೀರ!
ಆಟೋ ಮತ್ತು ಮಾರುತಿ ಕಾರು ನಡುವೆ ಅಫಘಾತವಾಗಿದ್ದು, ಆಟೋದಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಹರಿವೇಸಂದ್ರ ಬಳಿ ನಡೆದಿದೆ. ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯವಾಗಿದ್ದು, ದಂಪತಿ ಆಟೋದಲ್ಲಿ ಕೆ.ಜಿ.ಟೆಂಪಲ್ ಕಡೆ ತೆರಳುತ್ತಿದ್ದರು. ಇಂದು ಕೆ.ಜಿ.ಟೆಂಪಲ್ ಗ್ರಾಮದಲ್ಲಿ ಸಂತೆ ಇರೋ ಹಿನ್ನೆಲೆ ದಂಪತಿ ವ್ಯಾಪಾರಕ್ಕೆಂದು ತೆರಳುತ್ತಿದ್ದರು. ಈ ವೇಳೆ ನಡೆದ ಅಪಘಾತದಲ್ಲಿ ಪತಿ ಕಲ್ಲೂರು ನಾಗರಾಜ್ ಸಾವನ್ನಪ್ಪಿದ್ದಾರೆ.