Friday, May 17, 2024

ಇವ್ರ ನಾಯಕರು ಸೋನಿಯಾ, ಪ್ರಿಯಾಂಕಾ ಸಹ ಹೆಣ್ಣುಮಕ್ಕಳು : ಅಶ್ವತ್ಥನಾರಾಯಣ

ಬೆಂಗಳೂರು : ಇವರ ನಾಯಕರು ಸೋನಿಯಾ, ಪ್ರಿಯಾಂಕಾ ಸಹ ಹೆಣ್ಣುಮಕ್ಕಳು. ಇವರಿಗೆ ಹೆಣ್ಣುಮಕ್ಕಳ ಬಗ್ಗೆ ಕಾಳಜಿ ಇದೆಯಾ? ಎಂದು ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗೃಹ ಇಲಾಖೆ ಕ್ರಮ ನೋಡಿದರೆ ಸರ್ಕಾರ ಬದುಕಿದೆಯಾ? ಇಲ್ಲವಾ? ಎನ್ನುವ ಅನುಮಾನ ಬರುತ್ತಿದೆ. ಉಡುಪಿ ಘಟನೆ ನೋಡಿಯೂ ಸರ್ಕಾರದ ನಡೆ ಖಂಡನೀಯ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಇದು ಕೋಮುವಾದಿ ಸರ್ಕಾರ. ಜಿಹಾದಿ ಸರ್ಕಾರ ಎನ್ನುವುದಕ್ಕೆ ಉಡುಪಿ ಘಟನೆ ನಿದರ್ಶನ. ಮೂವರು ಆರೋಪಿತ ವಿದ್ಯಾರ್ಥಿನಿಯರ ಮೇಲೆ ಪ್ರಕರಣ ದಾಖಲಿಸಿಲ್ಲ. ಘಟನೆಯೇ ಆಗಿಲ್ಲ ಎನ್ನುವ ಮಾಹಿತಿ ನೀಡಿದ್ರು. ತಪ್ಪೊಪ್ಪಿಕೊಂಡಿದ್ದಾರೆ, ವಿಡಿಯೋ ಡಿಲೀಟ್ ಆಗಿದೆ. ವೈರಲ್ ಆಗಿಲ್ಲ, ಸಂತ್ರಸ್ಥೆ ದೂರು ನೀಡಿಲ್ಲ. ಹಾಗಾಗಿ, ಪ್ರಕರಣ ದಾಖಲಿಸಲ್ಲ ಎನ್ನುವ ನಡೆ ಖಂಡನೀಯ ಎಂದು ಗುಡುಗಿದರು.

ಹೆಣ್ಣುಮಕ್ಕಳ ಬಗ್ಗೆ ಕಿಂಚಿತ್ ಗೌರವ ಇದ್ಯಾ?

ಇದು ಹುಡುಗಾಟಿಕೆ, ಮಕ್ಕಳಾಟ ಅಂತ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇವರಿಗೆ ಮಾನ ಮರ್ಯಾದೆ ಇದೆಯಾ? ಹೆಣ್ಣುಮಕ್ಕಳ ಬಗ್ಗೆ ಕಿಂಚಿತ್ ಗೌರವ ಇದೆಯಾ? ಇವರ ನಾಯಕರು ಸೋನಿಯಾ, ಪ್ರಿಯಾಂಕ ಕೂಡ ಹೆಣ್ಣುಮಕ್ಕಳು. ಪ್ರತಿಭಟನೆ ಮಾಡಿದ ವಿದ್ಯಾರ್ಥಿನಿಯರನ್ನು ಬೆದರಿಸಿದ್ದಾರೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ, ಇದು ಖಂಡನೀಯ. ಇದು ಸರ್ಕಾರವಾ? ಚುನಾಯಿತ ಸರ್ಕಾರ ನಡೆದುಕೊಳ್ಳುವ ರೀತಿಯಾ? ಎಂದು ಛೇಡಿಸಿದರು.

ಇದನ್ನೂ ಓದಿ : ಉಡುಪಿ ಘಟನೆ ಬಹಳ ಸಣ್ಣದು : ಡಾ.ಜಿ ಪರಮೇಶ್ವರ

ಗೃಹ ಸಚಿವರನ್ನು ವಜಾ ಮಾಡಬೇಕು

ಡಿಕ್ಟೇಟರ್ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ. ಪ್ರಕರಣ ಬೆಳಕಿಗೆ ತಂದ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾರೆ. ಈಗ ಪ್ರತಿರೋಧ ಹೆಚ್ಚಾದ ನಂತರ ಸ್ವಯಂ ಪ್ರೇರಿತ ದೂರು ಖಲಿಸಿಕೊಳ್ಳಲಾಗಿದೆ. ಇವರ ಮನೆಯ ಮಕ್ಕಳು ಶೌಚಾಲಯಕ್ಕೆ ಹೋದಾಗ ವಿಡಿಯೋ ಮಾಡಿದರೆ ಆಗಲೂ ಸಣ್ಣ ವಿಷಯ ಎನ್ನಲಾಗುತ್ತಾ? ಇಷ್ಟೆಲ್ಲಾ ಆದರೂ ಏನೂ ಆಗಿಲ್ಲ ಎನ್ನುವ ಸರ್ಕಾರ ವಜಾ ಮಾಡಬೇಕು. ಗೃಹ ಸಚಿವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಇದು ವ್ಯವಸ್ಥಿತ ಪಿತೂರಿ, ಪೂರ್ವನಿಯೋಜಿತ ಕೃತ್ಯ

ಯಾರನ್ನು ಬೇಕಾದರೂ ಕೊಲೆ ಮಾಡಿ, ರೇಪ್ ಮಾಡಿ ಎನ್ನುವ ಧೋರಣೆ ತಳೆದಿರುವ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ತಕ್ಷಣ ಪ್ರಕರಣ ಬಯಲಿಗೆಳೆದ ವಿದ್ಯಾರ್ಥಿನಿ ಮೇಲಿನ ದೂರು ವಾಪಸ್ ಪಡೆಯಬೇಕು. ಪ್ರಕರಣ ಸಿಬಿಐ, ಎನ್ಐಎಗೆ ವಹಿಸಬೇಕು. ಇದು ವ್ಯವಸ್ಥಿತ ಪಿತೂರಿ, ಪೂರ್ವನಿಯೋಜಿತ ಕೃತ್ಯ. ಜಿಹಾದಿ ಮನಸ್ಥಿತಿ ಇದೆ ಎಂದು ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಆಕ್ರೋಶ ಹೊರಹಾಕಿದರು.

RELATED ARTICLES

Related Articles

TRENDING ARTICLES