Sunday, May 19, 2024

ಡಾಕ್ಟರೇಟ್ ಸ್ವೀಕರಿಸಿದ ರೈತ ನಾಯಕ ಯಡಿಯೂರಪ್ಪ

ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ, ರೈತ ನಾಯಕ ಬಿ.ಎಸ್ ಯಡಿಯೂರಪ್ಪ ಅವರು ಶಿವಮೊಗ್ಗ ಕೃಷಿ ವಿವಿಯ 8ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್ ಪ್ರದಾನ ಮಾಡಿದರು.

ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ.ಬಿ.ಎಸ್ ಯಡಿಯೂರಪ್ಪ ಅವರು, ಗೌರವ ಡಾಕ್ಟರೇಟ್ ಪದವಿ ಪಡೆಯಲು ಹರ್ಷವೆನಿಸುತ್ತದೆ. ನನ್ನ ಕರ್ಮ ಭೂಮಿ, ಪುಣ್ಯಭೂಮಿಯಲ್ಲಿ ಈ ಗೌರವ ಪಡೆಯುತ್ತಿರುವುದು ನನ್ನ ಸುದೈವ ಎಂದು ಹೇಳಿದರು.

ಇದನ್ನೂ ಓದಿ : ವೃಕ್ಷಮಾತೆ ತುಳಸಿಗೌಡಗೆ ಗೌರವ ಡಾಕ್ಟರೇಟ್ ಘೋಷಣೆ

ಹಿಂದಿನ ಹೋರಾಟ ಮೆಲುಕು ಹಾಕಿದ ಬಿಎಸ್ ವೈ

ರೈತನ ಸಂಕಷ್ಟವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ, ಪ್ರತ್ಯೇಕ ಕೃಷಿ ಬಜೆಟ್, ಭೂ ಹಕ್ಕು ಸರಳೀಕರಣ, ನಾನಾ ಯೋಜನೆ ಅನುಷ್ಠಾನ ಮಾಡಿದ್ದೆ ಎಂದು ಹಿಂದಿನ ಹೋರಾಟಗಳನ್ನು ಬಿಎಸ್ ವೈ ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ಪದವೀಧರರಿಗೆ ಪದವಿ ಪ್ರಧಾನ ಮಾಡಲಾಯಿತು. ಕೃಷಿ ಸಚಿವ ಹಾಗೂ ವಿವಿ ಸಹ-ಕುಲಾಧಿಪತಿ ಎನ್. ಚಲುವರಾಯಸ್ವಾಮಿ, ವಿವಿ ಕುಲಪತಿ ಪ್ರೊ.ಜಗದೀಶ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪುತ್ರ ವಿಜಯೇಂದ್ರ ಅಭಿನಂದನೆ

ಗೌರವ ಡಾಕ್ಟರೇಟ್ ಪಡೆದ ತಂದೆಗೆ ಪುತ್ರ ಬಿ.ವೈ ವಿಜಯೇಂದ್ರ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದ ರೈತನಾಯಕ ಡಾ.ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿನಂದನೆಗಳು. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ದೇಶಕ್ಕೇ ಮಾದರಿಯಾಗಿ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳ ಜಾರಿಗೆ ಶ್ರಮಿಸಿದ್ದ ರೈತಬಂಧುವಿಗೆ ಶ್ರೇಷ್ಠಗೌರವ ಸಂದಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES