Friday, May 17, 2024

ನಾವು ಕನಿಷ್ಠ ಶಿಕ್ಷೆ ಕೊಟ್ಟಿದ್ದೇವೆ, ಕಠಿಣ ಕ್ರಮಕ್ಕೂ ಹಿಂಜರಿಯಲ್ಲ : ಯು.ಟಿ ಖಾದರ್

ಬೆಂಗಳೂರು : ನಾವು ಅವರಿಗೆ ಕನಿಷ್ಠ ಶಿಕ್ಷೆ ಕೊಟ್ಟಿದ್ದೇವೆ. ಇದಕ್ಕಿಂತಲೂ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಖಡಕ್ ಎಚ್ಚರಿಕೆ ನೀಡಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸದನದ ಗೌರವ ಕಾಪಾಡಬೇಕು. ಜನರಿಗೆ ಗೌರವ ಬರಬೇಕು. ಇಂದಿನ ಸಣ್ಣ ಘಟನೆ ದೊಡ್ಡದಾಗಿದೆ ಎಂದು ಬೇಸರಿಸಿದರು.

ಪ್ರೋಟೋಕಾಲ್‌ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟಿದ್ದೆ. ಆದರೆ, ಅದೇ ಕಾರಣ ಇಟ್ಟುಕೊಂಡು ಇಲ್ಲಿ ಬಂದು ಧರಣಿ ಮಾಡಿದ್ರು. ಧರಣಿ ಮಾಡಲು ಎಲ್ಲರಿಗೂ ಅವಕಾಶ ಇದೆ. ಯಾರಿಗೆ ಮಾತನಾಡಬೇಕೋ ಅವರು ಮಾತಾಡಿ. ಉಳಿದವರು ಊಟ ಮಾಡಿ ಬಂದು ಮಾತಾಡಿ ಅಂತ ನಾನು ಹೇಳಿ ಹೋಗಿದ್ದೆ. ಅವಾಗ ನಾನು ಇಲ್ಲಿಗೆ ಡೆಪ್ಯುಟಿ ಸ್ಪೀಕರ್ ಗೆ ಆಹ್ವಾನ ಮಾಡಿದ್ದೆ. ಆದರೆ ಅವರ ಮುಂದೆ ನಡೆದು ಕೊಂಡ ರೀತಿ ಯಾರಿಗೂ ಶೋಭೆ ತರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ : ಕಾಂಗ್ರೆಸ್ ಸೇಡಿನ ರಾಜಕೀಯ ಮಾಡ್ತಿದೆ : ಬೊಮ್ಮಾಯಿ ಕಿಡಿ

ಇಡೀ ದೇಶದಲ್ಲಿ ಕಪ್ಪು ಚುಕ್ಕೆ

ಶಾಸನ ಸಭೆಗೆ ಅಗೌರವ ತೋರಿದ್ದಾರೆ. ಅಲ್ಲದೇ ಇಡೀ ದೇಶದಲ್ಲಿ ಕಪ್ಪು ಚುಕ್ಕೆ ಕೂಡ ಆಗಿದೆ. ಮೆಟ್ಟಿಲುಗಳ ವರೆಗೂ ಮುಂದೆ ಬಂದು ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿರೋರಿಗೆ ಕ್ರಮ ಮಾಡದೇ ಇರಬೇಕಾ? ಇಂದು ನಾನು ಈ ರೀತಿ ಕ್ರಮ ತಗೊಂಡಿಲ್ಲ ಅಂದ್ರೆ, ಮುಂದೆ ಈ ಪೀಠಕ್ಕೆ ಯಾರು ಬರ್ತಾರೆ? ಅದಕ್ಕಾಗಿ ನಾವು ಕನಿಷ್ಠ ಶಿಕ್ಷೆ ಅವರಿಗೆ ಕೊಟ್ಟಿದ್ದೇವೆ. ಎರಡು ದಿನಗಳ ಮಟ್ಟಿಗೆ ಅವರನ್ನು ಸದನದಿಂದ ಅಮಾನನು ಮಾಡಿದ್ದೇವೆ ಎಂದು ಹೇಳಿದರು.

ಚಹಾ ಕುಡಿಸೋಕೆ ಆಗುತ್ತಾ?

ಇಂದಿನ ಎಲ್ಲ ಘಟನೆ ಅತ್ಯಂತ ನೋವು ತಂದಿದೆ. ಇಷ್ಟೆಲ್ಲ ಮಾಡಿದವರನ್ನು ಕರೆದು ನಾನು ಅವರಿಗೆ ಚಹಾ ಕುಡಿಸೋಕೆ ಆಗುತ್ತಾ? ಅದಕ್ಕಾಗಿ ಅವರ ವಿರುದ್ಧ ಕ್ರಮ ತಗೊಂಡಿದ್ದು. ದೇಶಕ್ಕೂ ಕೂಡ ನಾವು ಕಠಿಣ ಕ್ರಮದ ಸಂದೇಶ ಕೊಡಬೇಕಾಗುತ್ತದೆ. ಆ ಎಲ್ಲಾ ಸದಸ್ಯರಿಗೂ ದೇವರು ಇನ್ಮುಂದೆ ಬುದ್ದಿ ಕೊಡಲಿ. ಅವರು ಎಷ್ಟೇ ದುರುಪಯೋಗ ಮಾಡಿಕೊಂಡ್ರು, ಅವರನ್ನು ಸರಿಪಡಿಸುವ ಕೆಲಸ ಮಾಡ್ತೀನಿ ವಿನಹ ನಾನು ನನ್ನ ಒಳ್ಳೆಯತನ ಬಿಡೋದಿಲ್ಲ. ಮುಂದೆ ಈ ರೀತಿ ಆದರೆ ಕಠಿಣ ಕ್ರಮಗಳನ್ನು ತಗೊತ್ತೀವಿ ಎಂದು ವಾರ್ನಿಂಗ್ ಕೊಟ್ಟರು.

RELATED ARTICLES

Related Articles

TRENDING ARTICLES