Monday, May 20, 2024

ಊಟ ಮಾಡಿ ಬಂದು ಸತ್ಯಾಗ್ರಹ ಧರಣಿ ಮಾಡೋಣ : ಬಿ.ಎಸ್ ಯಡಿಯೂರಪ್ಪ

ಬೆಂಗಳೂರು : ನಮ್ಮದು ಒಂದೇ ಗುರಿ. ಅವ್ರು ಕೊಟ್ಟ 5 ಉಚಿತ ಗ್ಯಾರಂಟಿ ಜಾರಿ ಮಾಡಬೇಕು. ಇಲ್ಲವಾದಲ್ಲಿ ಅವ್ರು ಅಧಿಕಾರ ಬಿಟ್ಟು ತೊಲಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘರ್ಜಿಸಿದರು.

ಬೆಂಗಳೂರಿನ ಅರಮನೆ ಮೈದಾನ ಹಮ್ಮಿಕೊಂಡಿದ್ದ ಬಿಜೆಪಿ‌ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರ್ಕಾರದ 5 ಕಿಲೋ ಅಕ್ಕಿ ಸೇರಿ ಒಟ್ಟು 15 ಕಿಲೋ ಅಕ್ಕಿ ಕೊಡಬೇಕು. ಇಲ್ಲವಾದರೆ, ನಾನು ಗಾಂಧಿ ಪ್ರತಿಮೆ ಎದುರು ಧರಣಿ ಕೂರುತ್ತೇನೆ. ಸದನದ ಒಳಗೆ ಶಾಸಕರು ಹೋರಾಟ ಮಾಡಿ, ಕಾಂಗ್ರೆಸ್ ನವರಿಗೆ ಪಾಠ ಕಲಿಸಬೇಕು ಎಂದು ಯಡಿಯೂರಪ್ಪ ಕರೆ ಕೊಟ್ಟರು.

ಇದನ್ನೂ ಓದಿ : ಬಿಜೆಪಿ ಮೂಗಿನ ಬದಲು ಹಣೆಗೆ ತುಪ್ಪ ಸವರಿದೆ : ಸಿದ್ದರಾಮಯ್ಯ

ಮೂಗು ಹಿಂಡುವ ಕೆಲಸ ಮಾಡೋಣ

ಈ ಸರ್ಕಾರದ ಮೂಗು ಹಿಂಡುವ ಕೆಲಸವನ್ನು ನಾವು ಮಾಡೋಣ. ಅಧಿವೇಶನ ಆರಂಭದ ದಿನದಿಂದ ನಾವು ಗಾಂಧಿ ಪ್ರತಿಮೆ ಮುಂದೆ ಕೂತು ಪ್ರತಿಭಟನೆ ಮಾಡಬೇಕು. ನಮ್ಮ ಶಾಸಕರು ಒಂದು ದಿನ ಅಧಿವೇಶನ ನಡೆಸಲು ಬಿಡದೇ ಹೋರಾಟ ಮಾಡಬೇಕು. ಉಪವಾಸ ಸತ್ಯಾಗ್ರಹ ಮಾಡುವ ಅವಶ್ಯಕತೆ ಇಲ್ಲ. ಊಟ ಮಾಡಿ ಬಂದು ಸತ್ಯಾಗ್ರಹ ಧರಣಿ ಮಾಡೋಣ ಎಂದು ಹೇಳಿದರು.

ರಾಜಕೀಯ ದೊಂಬರಾಟ ನಡೆಯೋಲ್ಲ

ಸಿದ್ದರಾಮಯ್ಯನವರೇ, ಅಧಿಕಾರ ಮದದಿಂದ ಏನೇನೋ ಗ್ಯಾರಂಟಿ ಕೊಟ್ರಿ. ಇವಾಗ ನರೇಂದ್ರ ಮೋದಿ ಮೇಲೆ ಬೊಟ್ಟು ಮಾಡಿ ತೋರಿಸ್ತೀರಲ್ಲ. ಅಕ್ಕಿ ಸೇರಿದಂತೆ 5 ಉಚಿತ ಭರವಸೆಗಳನ್ನು ಈಡೇರಿಸಲೇಬೇಕು. ಹೋರಾಟದ ಮೂಲಕ ಈ ಸರ್ಕಾರಕ್ಕೆ ಪಾಠ ಕಲಿಸಬೇಕಿದೆ. ರಾಜಕೀಯ ದೊಂಬರಾಟ ಮಾಡಲು ಬಿಡೋದಿಲ್ಲ ಎಂದು ಯಡಿಯೂರಪ್ಪ ಎಚ್ಚರಿಕೆ ಸಂದೇಶ ರವಾನಿಸಿದರು.

RELATED ARTICLES

Related Articles

TRENDING ARTICLES