Sunday, May 12, 2024

ಉಪವಾಸದಿಂದ ಸಾಯಲಿ ಅಂತ ಅಕ್ಕಿ ಕೊಡ್ತಿಲ್ಲ : ಮಲ್ಲಿಕಾರ್ಜುನ ಖರ್ಗೆ ಕಿಡಿ

ಬೆಂಗಳೂರು : ಬಡವರು ಉಪವಾಸದಿಂದ ಸಾಯಲಿ ಅಂತ ಕೇಂದ್ರ ಸರ್ಕಾರ ಅಕ್ಕಿ ಕೊಡ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ಕೊಡಬಾರದು ಅಂತ ನಿರ್ಧರಿಸಿದೆ. ನಮ್ಮ ಗ್ಯಾರಂಟಿಯನ್ನು ಫುಲ್ ಫಿಲ್ ಮಾಡಲು ಅಕ್ಕಿ ಕೊಡಬೇಕು ಎಂದು ಕುಟುಕಿದ್ದಾರೆ.

ನಾವು ದಾನವಾಗಿ ಕೇಳ್ತಿಲ್ಲ, ಫ್ರೀಯಾಗಿ ಕೊಡಿ ಅಂತಿಲ್ಲ. ಅಕ್ಕಿ ದಾಸ್ತಾನು ಇದೆ ಕೊಡಿ. ಕಾಂಗ್ರೆಸ್​ಗೆ ಲಾಭ ಆಗುತ್ತೆ ಅಂತ ರಾಜಕೀಯ ಮಾಡುವುದನ್ನು ಬಿಡಬೇಕು. ಬಡವರಿಗೆ ಅಕ್ಕಿ ಧಾರಾಳವಾಗಿ ಕೊಡಬೇಕು. ಕೋವಿಡ್ ಸಮಯದಲ್ಲಿ ಅಕ್ಕಿ ಇದೆ ತಗೊಳ್ಳಿ ಅಂತ ಮೋದಿನೇ ಹೇಳಿದ್ರು. ಈಗ ಸಂಕಷ್ಟದಲ್ಲಿರೋ‌ ಜನಕ್ಕೆ ಅಕ್ಕಿ ಕೊಡಲಿಲ್ಲ ಅಂದ್ರೆ ಹೇಗೆ? ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡದೆ ಇರುವುದು ಅಕ್ಷಮ್ಯ ಅಪರಾಧ

ನೆಕ್ಸ್ಟ್ ತಯಾರಿ ಶಿಮ್ಲಾದಲ್ಲಿ ಮಾಡ್ತೀವಿ

ಕಾಂಗ್ರೆಸ್ ಮೈತ್ರಿಕೂಟ ವಿಚಾರ ಕುರಿತು ಮಾತನಾಡಿ, ಲೋಕಸಭಾ ಚುನಾವಣೆಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋಗ್ತೀವಿ. ಸಂವಿಧಾನ ಉಳಿಸುವ ವಿಚಾರಧಾರೆ ಇರುರೋರೆಲ್ಲ ಸೇರಿ ಚುನಾವಣೆ ಮಾಡಲು ನಿರ್ಣಯ ಮಾಡಿದ್ದೇವೆ. ಮುಂದಿನ ತಯಾರಿ ಶಿಮ್ಲಾದಲ್ಲಿ ಮಾಡುತ್ತೇವೆ. ಅದಕ್ಕೆ ಇನ್ನೂ ದಿನಾಂಕ ಆಗಿಲ್ಲ ಎಂದು ಹೇಳಿದ್ದಾರೆ.

ಯಾವ್ಯಾವ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಅದೆಲ್ಲಾ ಶಿಮ್ಲಾ ಸೆಶನ್​​ನಲ್ಲಿ ತೀರ್ಮಾನ ಮಾಡ್ತೇವೆ. ಜುಲೈನಲ್ಲಿ ಪಾರ್ಲಿಮೆಂಟ್ ಸೆಶನ್ ಆರಂಭ ಆಗುತ್ತದೆ. ಎಲ್ಲ ಪಕ್ಷದ ಲೀಡರ್​ಗಳನ್ನ ಒಗ್ಗೂಡಿಸಲಿದ್ದೇವೆ. ಯಾವ್ಯಾವ ಪ್ರಶ್ನೆಗಳನ್ನ ಎತ್ತಬೇಕು ಅಂತ ತೀರ್ಮಾನ ಮಾಡುತ್ತೇವೆ. ಅಜೆಂಡಾ ತಯಾರಿ ಮಾಡಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES