Monday, May 20, 2024

ಡಿಸೆಂಬರ್​​ನಲ್ಲಿ ಈ ಸರ್ಕಾರ ಬಿದ್ದು ಹೋಗಲಿದೆ : ಕಟೀಲ್ ಭವಿಷ್ಯ

ಬೆಂಗಳೂರು : ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂಬ ಕಾಂಗ್ರೆಸ್ ಸಚಿವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿಸೆಂಬರ್ ನಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ವಿದ್ಯುತ್ ಬಿಲ್ ನಲ್ಲಿ ಸರ್ಕಾರ ವಂಚನೆ ಮಾಡುತ್ತಿದೆ. ಕಳೆದ ಹಲವು ದಿನಗಳಿಂದ ಜನಸಾಮಾನ್ಯರು ದುಬಾರಿ ವಿದ್ಯುತ್ ಬಿಲ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಜನ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಎಫ್‌ಕೆಸಿಸಿಐ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ಕೊಟ್ಟಿದೆ. ಇದೇ ಜೂ.22ರ ಎಫ್‌ಕೆಸಿಸಿಐ ಬಂದ್ ಗೆ ಬಿಜೆಪಿ ನೈತಿಕವಾಗಿ ಬೆಂಬಲ ಕೊಟ್ಟಿದೆ ಎಂದು ಹೇಳಿದ್ದಾರೆ.

ವಿದ್ಯುತ್ ಬಿಲ್ ನಲ್ಲಿ ವಂಚನೆ

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉಚಿತ ವಿದ್ಯುತ್ ಅಂತ ಹೇಳಿ, ಬಾಕಿ ಉದ್ಯಮಶೀಲರಿಂದ ಹಾಗೂ ಜನರಿಂದ ವಿದ್ಯುತ್ ಬಿಲ್ ನಲ್ಲಿ ವಂಚನೆ ಮಾಡುತ್ತಿದೆ. ಕೈಗಾರಿಕಾ ವಾಣಿಜ್ಯ ಮಂಡಳಿ ಬಂದ್ ಗೆ ಕರೆ ಕೊಟ್ಟಿದೆ. 8, 7ಲಕ್ಷ ರೂ. ಬಿಲ್ ಕೂಡ ಹಾಕಿದ್ದಾರೆ. ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ ಹೋರಾಟಕ್ಕೆ ತೀರ್ಮಾನ ಮಾಡಿದ್ದಾರೆ. ಬಿಜೆಪಿ ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಸಿಎಂ 5 ವರ್ಷ ಅಧಿಕಾರದಲ್ಲಿ ಇರ್ತಾರಾ ಅನ್ನೋದೇ ಡೌಟು : ಬಿ.ವೈ ವಿಜಯೇಂದ್ರ

ರೈತರಿಗೆ, ಜನರಿಗೆ ಹೊರೆ

ಕಳೆದ ಒಂದು ತಿಂಗಳಲ್ಲಿ ಈ ಸರ್ಕಾರ ರಾಜ್ಯದ ಜನರಿಗೆ ಬೇರೆ ಬೇರೆ ರೀತಿಯಲ್ಲಿ ಹೊಡೆತ ಕೊಡುತ್ತಿದೆ. ರೈತರಿಗೂ ಹಾಗೂ ಜನರಿಗೆ ಹೊರೆ ಆಗುವ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕಳೆದ 15 ದಿನಗಳ ವಿದ್ಯುತ್ ಬಿಲ್ ಬಗ್ಗೆ ಚರ್ಚೆ ನಡೆಯುತ್ತಿದೆ. ಲೋಡ್ ಶೆಡ್ಡಿಂಗ್ ರೀತಿಯಲ್ಲಿ ವಿದ್ಯುತ್ ವ್ಯತ್ಯಯ ಆಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಲ್ಲಿದೆ ಹೊಂದಾಣಿಕೆ ರಾಜಕಾರಣ?

ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರತಾಪ ಸಿಂಹ ಹೇಳಿಕೆ ವಿಚಾರ ಮಾತನಾಡಿ, ಬಿಜೆಪಿಯಲ್ಲಿ ಎಲ್ಲೂ ಹೊಂದಾಣಿಕೆ ರಾಜಕಾರಣ ಇಲ್ಲ. ನಾವು ಹೋರಾಟ ಮಾಡಿಯೇ ಬಂದಿದ್ದೇವೆ. ಅದಕ್ಕೆ ಡಿ.ಕೆ ಶಿವಕುಮಾರ್ ಎದುರು ಅಶೋಕ್, ಸಿದ್ದರಾಮಯ್ಯ ಎದುರು ಸೋಮಣ್ಣ ನಿಲ್ಲಿಸಿದೆವು. ಎಲ್ಲಿದೆ ಹೊಂದಾಣಿಕೆ ರಾಜಕಾರಣ? ಅವರವರ ಭಾವನೆಗಳಿಗೆ ಸರಿಯಾಗಿ ಮಾತಾಡಿದ್ದಾರೆ, ಅವರನ್ನು ಕರೆದು ನಾವು ಮಾತಾಡುತ್ತೇವೆ ಎಂದು ತಿಳಿಸಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಮಾತನಾಡಿ, ಸಂದರ್ಭ ಬಂದಾಗ ವಿಪಕ್ಷ ನಾಯಕನ ಆಯ್ಕೆಯಾಗುತ್ತದೆ. ಅಧಿವೇಶನಕ್ಕೂ ಮುನ್ನ ಆಯ್ಕೆ ಮಾಡುತ್ತೇವೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES