Saturday, May 4, 2024

ಬೆಂಗಳೂರಲ್ಲಿ ‘ರಕ್ಕಸ ಮಳೆಗೆ ಮೊದಲ ಬಲಿ’, ಅಸ್ವಸ್ಥಗೊಂಡ ಯುವತಿ ಸಾವು

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಸುರಿದ ಅಲ್ಲಿಕಲ್ಲು ಸಹಿತ ಭಾರೀ ಮಳೆಗೆ ಮೊದಲ ಬಲಿಯಾಗಿದೆ.

ಕೆ.ಆರ್​.ಸರ್ಕಲ್​ನ ಅಂಡರ್​ಪಾಸ್​ನಲ್ಲಿ ಕಾರಲ್ಲಿ ಸಿಲುಕಿದ ಯುವತಿ ಸಾವನ್ನಪ್ಪಿದ್ದಾರೆ. 23 ವರ್ಷದ ಭಾನುರೇಖಾ ಮೃತ ಯುವತಿ ಎಂದು ತಿಳಿದುಬಂದಿದೆ. ಇವರು ಇನ್ಪೋಸಿಸ್​ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಸೆಂಟ್​ ಮಾರ್ಥಾಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಯುವತಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಅರ್ಧ ಗಂಟೆಯಾದ್ರೂ ಚಿಕಿತ್ಸೆ ನೀಡದ ಹಿನ್ನಲೆ ಯುವತಿ ಕೊನೆಯುಸಿರೆಳೆದಿದ್ದಾರೆ.

ಆಂಧ್ರದಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬ ಬೆಂಗಳೂರಿನ ಭಾರೀ ಮಳೆಗೆ ಸಿಲುಕಿತ್ತು. ಕೆ.ಆರ್​.ಸರ್ಕಲ್​ ಅಂಡರ್​ಪಾಸ್​ನಲ್ಲಿ 8 ಅಡಿ ನೀರು ನಿಂತಿತ್ತು. ಈ ವೇಳೆ ಕಾರು ಮಳೆ ನೀರಲ್ಲಿ ಮುಳುಗಿತ್ತು. ಕಾರಿನಲ್ಲಿ ಸಿಲುಕಿದವರನ್ನು ಪೊಲೀಸರು ಕಾರ್ಯಾಚರಣೆ ಮೂಲಕ ರಕ್ಷಿಸಿದ್ದರು. ಬಳಿಕ, ಘಟನೆಯಲ್ಲಿ ತೀವ್ರ ಅಸ್ವಸ್ಥಗೊಂಡ ಮಹಿಳೆಯನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ : ಬೆಂಗಳೂರಿನಲ್ಲಿ ಅಲ್ಲಿಕಲ್ಲು ಸಹಿತ ಭಾರೀ ಮಳೆ, ಧರೆಗೆ ಉರುಳಿದ ಮರಗಳು

ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಸಿಎಂ ಭೇಟಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಬಳಿಕ, ಮೃತ ಯುವತಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇದಕ್ಕೂ ಮುನ್ನ ಮಳೆ ನೀರಿನಿಂದ ಜಲಾವೃತವಾಗಿದ್ದ ಕೆ.ಆರ್​.ಸರ್ಕಲ್​ ಅಂಡರ್​ಪಾಸ್​ ಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೆ, ನಗರದಲ್ಲಿ ದಿಢೀರ್ ಮಳೆಯಿಂದಾದ ಅವಾಂತರ, ಹಾನಿ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಬಳಿ ವರದಿ ಪಡೆದಿದ್ದಾರೆ.

ಧಾರಾಕಾರ ಮಳೆಗೆ ಬೆಂಗಳೂರಿಗರು ತತ್ತರ

ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದೆ. ಬಿರುಗಾಳಿಗೆ 10ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ವಿಧಾನಸೌಧ, ಮೆಜೆಸ್ಟಿಕ್, ಶಿವಾಜಿನಗರ, ಶಾಂತಿನಗರದಲ್ಲಿ, ಕೆ.ಆರ್​​ ಸರ್ಕಲ್​​, ಮಲ್ಲೇಶ್ವರ, ಯಶವಂತಪುರದಲ್ಲಿ ಭಾರಿ  ಮಳೆಯಾಗಿದೆ. ಗುಡುಗು ಸಿಡಿಲು ಸಮೇತ ಮಳೆ ಸುರಿದಿದ್ದು, ಧರೆಗೆ ಆಲಿಕಲ್ಲಿನ ಸಿಂಚನವಾಗಿದೆ. ಹಲವು ಕಡೆ ಅಂಡರ್​ ಪಾಸ್​ಗಳಲ್ಲಿ ನೀರು ತುಂಬಿಕೊಂಡಿದೆ. ನಗರದಲ್ಲಿ ಬಹುತೇಕ ರಸ್ತೆಗಳು ಕೆರೆಯಾಗಿ ಮಾರ್ಪಟ್ಟವು. ಇನ್ನು ಕೆಲವು ಕಡೆ ಮಳೆಯಿಂದ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ವಾಹನ ಸವಾರರು ಪರದಾಡಿದರು.

RELATED ARTICLES

Related Articles

TRENDING ARTICLES