Thursday, April 25, 2024

ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ‘ಆಟೋ ಚಾಲಕನ ಮೇಲೆ ಹಲ್ಲೆ’

ಶಿವಮೊಗ್ಗ : ಬಿಜೆಪಿಗೆ ವೋಟ್ ಹಾಕಿದೆ ಎಂದು ಹೇಳಿದ್ದಕ್ಕೆ ಆಟೋ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆ. 

ಶಿವಮೊಗ್ಗ ಜಿಲ್ಲೆ ಸೋಮಿನಕೊಪ್ಪ ಬಡಾವಣೆಯಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಹಲ್ಲೆ ಮಾಡಿದ್ದಲ್ಲದೆ, ಆಟೋ ಜಖಂ ಮಾಡಿದ್ದಾರೆ.

ಆಟೋ ಚಾಲಕ ಹರೀಶ್ ರಾವ್ ಎಂಬಾತ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಆಟೋ ಚಾಲಕ ಹರೀಶ್ ರಾವ್ ಮೇಲೆ ಹಲ್ಲೆ ಮಾಡಿದ್ದಾರೆ. ಮೊದಲು ಯಾರಿಗೆ ವೋಟ್ ಹಾಕಿದೆ ಎಂದು ಕೇಳಿರುವ ದುಷ್ಕರ್ಮಿಗಳು, ಹರೀಶ್ ರಾವ್ ಬಿಜೆಪಿಗೆ ಹಾಕಿದ್ದೆನೆ ಎಂದಿದ್ದಾನೆ. ಈ ಒಂದು ಕಾರಣದಿಂದಾಗಿ, ಆಟೋ ಚಾಲಕ ಹರೀಶ್ ರಾವ್ ಗೆ ಥಳಿಸಿ, ಆಟೋ ಜಖಂಗೊಳಿಸಿದ್ದಾರೆ.

ಹಲ್ಲೆ ಮಾಡಿ ಪ್ರಾಣ ಬೆದರಿಕೆ

ರಾಡ್ ನಿಂದ ಆಟೋ ಗಾಜು ಜಖಂಗೊಳಿಸಿದ್ದಾರೆ. ಆಟೋ ಮೇಲ್ಭಾಗದ ಶೀಟ್ ನ್ನು ಹರಿದು ಹಾಕಿದ್ದಾರೆ. ಸೋಮಿನಕೊಪ್ಪ ನಿವಾಸಿಗಳಾಗಿರುವ ಡಬ್ಬ ಅಲಿಯಾಸ್ ನಜ್ರು, ಇಡ್ಲಿ ಅಲಿಯಾಸ್ ಅಬ್ರಾರ್, ಹಾಗೂ ಮತ್ತೊಬ್ಬ ಯುವಕ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಹರೀಶ್ ರಾವ್ ಆರೋಪಿಸಿದ್ದಾನೆ.

ಚಾಲಕನಿಗೆ ರಕ್ಷಣೆ ನೀಡುವಂತೆ ಆಗ್ರಹ

ಇನ್ನು ಎಸ್.ಪಿ. ಕಚೇರಿಗೆ ಆಟೋ ಚಾಲಕ ಹರೀಶ್ ರಾವ್ ಆಗಮಿಸಿ ಅಳುತ್ತಾ ದೂರು ನೀಡಿದ್ದಾರೆ. ದೂರು ನೀಡಲು ಬಂದ ವೇಳೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡ ದೂರು ನೀಡಲು ಬಂದಿದ್ದು, ಈ ವೇಳೆ ಈಶ್ವರಪ್ಪರಿಗೆ ಕಾಲಿಗೆ ಬಿದ್ದು, ರಕ್ಷಣೆ ನೀಡುವಂತೆ ಆಟೋ ಚಾಲಕ ಕೋರಿದ್ದಾನೆ.

ಕೂಡಲೇ ಈಶ್ವರಪ್ಪ ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಮಾತನಾಡಿ, ಆಟೋ ಚಾಲಕನಿಗೆ ರಕ್ಷಣೆ ನೀಡುವಂತೆ, ಹಾಗೂ ಹಲ್ಲೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಕ್ರೂರ ಮನಸ್ಥಿತಿ

ಘಟನೆ ಕುರಿತು ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. ನಮ್ಮ ಪಕ್ಷವನ್ನು ಬೆಂಬಲಿಸಿದ್ದಕ್ಕಾಗಿ ದುಡಿದು ತಿನ್ನುವ ಶ್ರಮಜೀವಿಯೊಬ್ಬನ ಆಟೋವನ್ನು ಜಖಂ ಮಾಡುವ ಕಾಂಗ್ರೆಸ್ ಪಕ್ಷದ ಕ್ರೂರ ಮನಸ್ಥಿತಿ, ಸರ್ಕಾರ ರಚನೆಯಾಗುವ ಮೊದಲೇ ಹೊರಬಿದ್ದಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತೀಯ ಶಕ್ತಿಗಳಿಗೆ ಮೊದಲ ದಿನದಿಂದಲೇ ಬೆಂಗಾವಲಾಗಿ ನಿಂತಿರುವುದು ಸಾಮಾಜಿಕ ಸಾಮರಸ್ಯದ ದೃಷ್ಟಿಯಿಂದ ಒಳ್ಳೆಯ ಸೂಚನೆಯಲ್ಲ ಎಂದು ಕಿಡಿಕಾರಿದೆ.

RELATED ARTICLES

Related Articles

TRENDING ARTICLES