Friday, May 17, 2024

ಕಾಂಗ್ರೆಸ್ ನಲ್ಲಿ ‘ಲಿಂಗಾಯತ ಸಿಎಂ’ ಕೂಗು : ಯಾರಿಗೆ ಒಲಿಯುತ್ತೆ ಅದೃಷ್ಟ?

ಬೆಂಗಳೂರು : ಸಂಪೂರ್ಣ ಬಹುಮತದೊಂದಿಗೆ ಸ್ವತಂತ್ರ ಸರ್ಕಾರ ರಚಿಸುತ್ತೇವೆ ಎಂದು ಹೇಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ನಾಯಕರಿಗೆ  ಸಮೀಕ್ಷೆಗಳು ಹೊಸ ಹುರುಪು ತಂದಿವೆ. 

ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಹೊರಬಿದ್ದ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿವೆ. ಇದು ಕಾಂಗ್ರೆಸ್ ನಾಯಕರಿಗೆ ಬೂಸ್ಟರ್ ಡೋಸ್ ನೀಡಿದಂತಾಗಿದೆ.

ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಹೊರಬರುತ್ತಿದ್ದಂತೆ ಪಕ್ಷದ ರಾಜಕೀಯ ಚಟುವಟಿಕೆಗಳು ರಂಗೇರಿವೆ. ಕಾಂಗ್ರೆಸ್​​ನ ರಾಜ್ಯ ಉಸ್ತಾವಾರಿ ವಹಿಸಿಕೊಂಡಿರುವ ರಣ​ದೀಪ್ ಸುರ್ಜೇವಾಲ ಸೇರಿದಂತೆ ಪಕ್ಷದ ನಾಯಕರು ಮೇಲಿಂದ ಮೇಲೆ ಸಭೆ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ಪಾಳಯದಲ್ಲಿ ಲಿಂಗಾಯತ ಸಿಎಂ ಕೂಗು ಕೇಳಿ ಬಂದಿದೆ.

ಇದನ್ನೂ ಓದಿ : ಸಿದ್ದು-ಡಿಕೆಶಿಗೆ ಸಂ’ಕಷ್ಟ’ : ‘ಸಿಎಂ ಮಾಡಿದ್ರೆ ಬೇಡ ಅನ್ನಲ್ಲ’ ಎಂದ ಪರಂ

ಲಿಂಗಾಯತ ಅಭ್ಯರ್ಥಿಯೇ ಸಿಎಂ?

ಮತದಾನೋತ್ತರ ಸಮೀಕ್ಷೆಗಳು ನಿಜವಾಗಿ, ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದರೆ ಈ ಬಾರಿ ವೀರಶೈವ ಲಿಂಗಾಯತ ಅಭ್ಯರ್ಥಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದಾರೆ.

ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ನಿರ್ಲಕ್ಷಿಸಿರುವುದರಿಂದ ಈ ಬಾರಿ ಲಿಂಗಾಯತ ಮತಗಳು ರಾಜ್ಯದಲ್ಲಿ ಕಾಂಗ್ರೆಸ್​ನತ್ತ ವಾಲಿವೆ. ಇದು ಕಾಂಗ್ರೆಸ್ ಸರಳ ಬಹುಮತ ಪಡೆಯಲು ಸಹಕಾರಿಯಾಗಿದೆ. ಹೀಗಾಗಿ, ವೀರಶೈವರಿಗೆ ಸಿಎಂ ಹುದ್ದೆ ನೀಡುವಂತೆ ಹಿಂದೆಯೂ ಬೇಡಿಕೆ ಇಟ್ಟಿದ್ದೆ. ಈಗಲೂ ಅದನ್ನೇ ಪುನರುಚ್ಚರಿಸುವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೊಂಡಿದ್ದಾರೆ.

ಸಿಎಂ ಮಾಡಿದ್ರೆ ಬೇಡ ಅನ್ನಲ್ಲ

ಸಿಎಲ್‌ಪಿ ಸಭೆಯಲ್ಲಿ ಸಿಎಂ ಯಾರಾಗಬೇಕು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಭಿಮಾನಿಗಳ ಅಪೇಕ್ಷೆ ಮೇರೆಗೆ ಯಾರನ್ನೂ ಸಿಎಂ ಮಾಡುವುದಿಲ್ಲ. ಹೈಕಮಾಂಡ್ ನನ್ನನ್ನು ಸಿಎಂ ಮಾಡಿದರೆ ಬೇಡ ಎನ್ನಲು ಆಗುತ್ತಾ? ಎಂದು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES